ಲಖನೌ: ಇಲ್ಲಿಯ ಜಲನಿಗಮ ಕಚೇರಿಗೆ ದೌಡಾಯಿಸಿದ ಬಿಜೆಪಿ ಶಾಸಕ ಬ್ರಜೇಶ್ ಪ್ರಜಾಪತಿ ಲಂಚದ ಆಪಾದನೆ ಹೊತ್ತಿರುವ ಎಂಜಿನಿಯರ್ಗೆ ನೋಟಿನ ಹಾರ ಹಾಕಿರುವ ಘಟನೆ ನಡೆದಿದೆ.
‘ನೀವು ಲಂಚ ತೆಗೆದುಕೊಂಡಿದ್ದೀರಿ ಎಂದು ಕೇಳಿದ್ದೇನೆ. ಅದಕ್ಕಾಗಿ ಈ ಹಾರ’ ಎಂದು ಎಂಜಿನಿಯರ್ ಎಂ.ಸಿ. ಶ್ರೀವತ್ಸ ಅವರಿಗೆ ಶಾಸಕರು ಹೇಳಿದ್ದಾರೆ.
ನಂತರ ಜಲ ನಿಗಮದ ಮತ್ತೊಂದು ಕಚೇರಿಗೆ ಹೋದ ಶಾಸಕರು ನೌಕರರು ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಹೇಳಿ ಎಲ್ಲರನ್ನೂ ಹೊರಗೆ ಕಳುಹಿಸಿ ಕಚೇರಿಗೆ ಹೊರಗಡೆಯಿಂದ ಬೀಗ ಹಾಕಿದ್ದಾರೆ.
‘ಎಂಜಿನಿಯರ್ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ ಹಾಗಾಗಿ ನಾನು ಅವರಿಗೆ ನೋಟುಗಳ ಹಾರ ಹಾಕಿದೆ. ಸರ್ಕಾರಿ ಅಧಿಕಾರಿಗಳು ಸರಿಯಾಗಿ ಕರ್ತವ್ಯ ಮಾಡುತ್ತಿರುವರೇ ಎಂದು ಪರಿಶೀಲಿಸುವ ಅಧಿಕಾರ ನನಗಿದೆ’ ಎಂದು ತಮ್ಮ ವರ್ತನೆಯನ್ನು ಶಾಸಕರು ಸಮರ್ಥಿಸಿಕೊಂಡಿದ್ದಾರೆ. ಆದರೆ ‘ಕರ್ತವ್ಯದ ಸಮಯದಲ್ಲಿ ಕಚೇರಿಗೆ ಬೀಗ ಹಾಕುವ ಹಕ್ಕು ಯಾರಿಗೂ ಇಲ್ಲ. ಇದು ಅನುಚಿತ ವರ್ತನೆ’ ಎಂದು ಆಯುಕ್ತ ರಾಮ್ ವಿಶಾಲ್ ಮಿಶ್ರಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.