ಚೆನ್ನೈ (ಪಿಟಿಐ): ಕೇಂದ್ರದ ಅಧಿಕಾರದ ಗದ್ದುಗೆಯಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಕೆಳಗಿಳಿಸುವ ನಿಟ್ಟಿನಲ್ಲಿ, `ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಪರ್ಯಾಯ' ಮಾರ್ಗವೊಂದನ್ನು ನಿರ್ಮಿಸುವ ಪ್ರಯತ್ನದ ಭಾಗವಾಗಿ ಎಐಎಡಿಎಂಕೆ ಮತ್ತು ಸಿಪಿಐ ಮುಂಬರುವ ಲೋಕಸಭೆ ಚುನಾವಣೆಗಳನ್ನು ಮೈತ್ರಿಕೂಟ ರಚಿಸುವ ಮೂಲಕ ಎದುರಿಸುವುದಾಗಿ ಭಾನುವಾರ ಘೋಷಿಸಿದವು.
ತಮ್ಮ ನಿವಾಸದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಹೇಳಿಕೆ ನೀಡಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು `ಮುಂಬರುವ ಲೋಕಸಭೆ ಚುನಾವಣೆಗಳನ್ನು ಎಐಎಡಿಎಂಕೆ ಹಾಗೂ ಸಿಪಿಐ ಜಂಟಿಯಾಗಿ ಎದುರಿಸಲು ತೀರ್ಮಾನಿಸಿವೆ' ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ಎ.ಬಿ.ಬರ್ಧನ್ ಮತ್ತು ಸುಧಾಕರ್ ರೆಡ್ಡಿ ಅವರು ಉಪಸ್ಥಿತರಿದ್ದರು, ಬರ್ಧನ್ ಅವರು ಮಾತನಾಡಿ `ಜಯಲಲಿತಾ ಅವರು ಹೇಳಿದ್ದನ್ನು ನಾನು ದೃಢಿಕರಿಸುತ್ತೇನೆ. ನಮ್ಮ ಮೈತ್ರಿಕೂಟವು ವಿಜಯ ಸಾಧಿಸಲಿದ್ದು, ನಾವು ಗೆಲುತ್ತೇವೆ' ಎಂದು ಹೇಳಿದರು.
ಜಯಲಲಿತಾ ಅವರೇ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಎಐಎಡಿಎಂಕೆಯ ಕಾರ್ಯಕರ್ತರು ಕೂಗು ಹೆಚ್ಚುತ್ತಿದೆಯಲ್ಲ ಎಂಬ ಪ್ರಶ್ನೆಗೆ ಬರ್ಧನ್ ಅವರು `ಒಂದೊಮ್ಮೆ ಚುನಾವಣೆಯಲ್ಲಿ ನಾವು ಜಯ ಗಳಿಸಿದರೆ. ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.
`ತಮಿಳುನಾಡು ಮತ್ತು ಪುದುಚೇರಿಯಲ್ಲಿ 40 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದ್ದು, ಶಾಂತಿ, ಸಮೃದ್ಧಿ, ಪ್ರಗತಿ ಎನ್ನುವುದು ನಮ್ಮ ಚುನಾವಣಾ ಘೋಷವಾಕ್ಯವಾಗಿದೆ' ಎಂದು ಜಯಲಲಿತಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.