ಅಗರ್ತಲಾ : ತ್ರಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿ ಬಿಪ್ಲಬ್ ಕುಮಾರ್ ದೇಬ್ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ತಥಾಗತ ರಾಯ್ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದ ಬಿಜೆಪಿ ಮುಖಂಡ ಜಿಷ್ಣು ದೇಬ್ ಬರ್ಮನ್ ಸೇರಿದಂತೆ ಸಚಿವರಾಗಿ ಆಯ್ಕೆಯಾದ ಏಳು ಮುಖಂಡರಿಗೆ ಪ್ರಮಾಣ ವಚನ ಬೋಧಿಸಿದರು.
ಗಣ್ಯರ ಉಪಸ್ಥಿತಿ: ಅಸ್ಸಾಂ ರೈಫಲ್ಸ್ ಗ್ರೌಂಡ್ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಭಾಗವಹಿಸಿದ್ದರು.
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳನ್ನು ಮುನ್ನಡೆಸುತ್ತಿರುವ ಗುಜರಾತ್ನ ಮುಖ್ಯಮಂತ್ರಿ ವಿಜಯ್ ರುಪಾನಿ, ಶಿವರಾಜ್ ಸಿಂಗ್ ಚೌಹಾನ್(ಮಧ್ಯ ಪ್ರದೇಶ), ಸರ್ಬಾನಂದ ಸೊನೊವಾಲಾ(ಅಸ್ಸಾಂ), ರಘುಬಾರ್ ದಾಸ್(ಜಾರ್ಖಂಡ್) ಸಹ ಉಪಸ್ಥಿತರಿದ್ದರು.
ಬಿಜೆಪಿ ಸರ್ಕಾರ ರಚನಾ ವೇದಿಕೆಯಲ್ಲಿ ಸಿಪಿಐ(ಎಂ)ನ ಮಾಣಿಕ್ ಸರ್ಕಾರ್ : ತ್ರಿಪುರದ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಕೂಡ ಸಮಾರಂಭದ ವೇದಿಕೆಯಲ್ಲಿ ಹಾಜರಿದ್ದರು. ಪ್ರಧಾನಿ ಮೋದಿ ವೇದಿಕೆ ಮೇಲೆ ಬರುತ್ತಿದ್ದಂತೆ ಬಿಜೆಪಿ ಮುಖಂಡರು ಎದ್ದು ನಿಂತು ಕೈಮುಗಿದರು. ಮಾಣಿಕ್ ಸರ್ಕಾರ್ ಕೂಡ ಎದ್ದು, ಮಂದಸ್ಮಿತರಾಗಿ ಕೈಕುಲುಕಿ ಮೋದಿಯೊಂದಿಗೆ ಮಾತುಗಳನ್ನು ವಿನಿಮಯ ಮಾಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.