ADVERTISEMENT

ಎನ್‌ಐಎ ಹೈದರಾಬಾದ್‌ ಕಸ್ಟಡಿಗೆ ಯಾಸೀನ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಹೈದರಾಬಾದ್‌ನ ದಿಲ್‌ಸುಖ್‌ನಗರದಲ್ಲಿ ಸಂಭವಿಸಿದ್ದ ಅವಳಿ ಸ್ಫೋಟಗಳಿಗೆ ಸಂಬಂಧಿಸಿದಂತೆ ಇಂಡಿಯನ್‌ ಮುಜಾಹಿದೀನ್‌ ಉಗ್ರ ಯಾಸೀನ್‌ ಭಟ್ಕಳನನ್ನು ದೆಹಲಿ ನ್ಯಾಯಾಲಯವು ಎರಡು ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಹೈದರಾಬಾದ್‌ ಘಟಕದ ಕಸ್ಟಡಿಗೆ ಒಪ್ಪಿಸಿದೆ.

ದೆಹಲಿ ಎನ್‌ಐಎ ಕಸ್ಟಡಿಯಲ್ಲಿದ್ದ ಯಾಸೀನ್‌ನ ಕಸ್ಟಡಿ ಅವಧಿ ಮುಕ್ತಾಯವಾಗಿದ್ದರಿಂದ ಆತನನ್ನು ಶನಿವಾರ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ರಾಷ್ಟ್ರದ ವಿವಿಧೆಡೆ ನಡೆದಿದ್ದ ಸ್ಫೋಟಗಳಿಗೆ ಸಂಬಂಧಿಸಿದಂತೆ ಯಾಸೀನ್‌ನನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ದೆಹಲಿ ಎನ್‌ಐಎ ಕೋರ್ಟ್‌ಗೆ ತಿಳಿಸಿತು.

ಆದರೆ ಇದೇ ವೇಳೆ ಎನ್‌ಐಎ ಹೈದರಾಬಾದ್‌ ಘಟಕವು, ದಿಲ್‌ಸುಖ್‌ನಗರದಲ್ಲಿ ಸಂಭವಿಸಿದ್ದ ಸ್ಫೋಟಗಳಿಗೆ ಸಂಬಂಧಿಸಿದ ವಿಚಾರಣೆಗಾಗಿ ಯಾಸೀನ್‌ನನ್ನು ತನ್ನ ಕಸ್ಟಡಿಗೆ ನೀಡಬೇಕು ಎಂದು ಕೋರಿತ್ತು. ಇದನ್ನು ಪುರಸ್ಕರಿಸಿದ ಜಿಲ್ಲಾ ನ್ಯಾಯಾಧೀಶ ಐ.ಎಸ್‌.ಮೆಹ್ತಾ, ಯಾಸೀನ್‌ನನ್ನು ಎರಡು ದಿನಗಳ ಕಾಲ ಕಸ್ಟಡಿಗೆ ಆದೇಶಿಸಿದರು.

ಯಾಸೀನ್‌ನನ್ನು ಸೆ.23ರಂದು ಅಥವಾ ಅದಕ್ಕೆ ಮುನ್ನ ಕೋರ್ಟ್‌ಗೆ ಹಾಜರುಪಡಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.