ನವದೆಹಲಿ (ಪಿಟಿಐ): ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಪಟ್ಟು ಹಿಡಿದಂತಿರುವ ಪಿ.ಎ.ಸಂಗ್ಮಾ ಅವರು ತಮ್ಮ ನಿಲುವನ್ನು ವಿರೋಧಿಸಿದ ಹಾಗೂ ಶಿಸ್ತುಕ್ರಮದ ಬೆದರಿಕೆ ಹಾಕಿದ ಎನ್ಸಿಪಿ ನಾಯಕ ಶರದ್ ಪವಾರ್ ಅವರ ಬೆದರಿಕೆಗೂ ಜಗ್ಗದೆ ಸ್ಪರ್ಧಾ ಕಣದಿಂದ ಹಿಂದೆ ಸರಿಯಲು ನಿರಾಕರಿಸಿ ಬುಧವಾರ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರು.
ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ತಮಗೆ ಎಐಎಡಿಎಂಕೆ ಹಾಗೂ ಬಿಜೆಡಿ ಪಕ್ಷಗಳ ಬೆಂಬವಿದೆ ಎಂದು ಹೇಳಿರುವ ಸಂಗ್ಮಾ ಅವರು `ಎನ್ಡಿಎ ಒಳಗೊಂಡಂತೆ ಕಾಂಗ್ರೆಸೇತರ ಪಕ್ಷಗಳ ಹಿರಿಯ ಮುಖಂಡರು ತಮಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿವೆ~ ಎಂದು ಹೇಳಿದರು.
ಸಂಗ್ಮಾ ಅವರು ಬುಧವಾರ ಎನ್ಡಿಎ ಮೈತ್ರಿಕೂಟದ ಅಂಗವಾದ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರನ್ನು ಬೆಂಬಲ ಕೋರಿ ಭೇಟಿ ಮಾಡಿದ ಬೆನ್ನಲ್ಲೇ ತಮ್ಮ ರಾಜಿನಾಮೆ ಪತ್ರವನ್ನು ಎನ್ಸಿಪಿ ನಾಯಕ ಶರದ್ ಪವಾರ್ ಅವರಿಗೆ ಕಳುಹಿಸಿದರು.
ಎನ್ಸಿಪಿಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ ಸಂಗ್ಮಾ ಅವರು `ತಕ್ಷಣವೇ ನನ್ನನ್ನು ಎನ್ಸಿಪಿಯ ಪ್ರಾಥಮಿಕ ಸದಸ್ಯತ್ವದಿಂದ ಬಿಡುಗಡೆಗೊಳಿಸಿ~ ಎಂದು ತಮ್ಮ ರಾಜಿನಾಮೆ ಪತ್ರದಲ್ಲಿ ಹೇಳಿದ್ದಾರೆ.
ರಾಜಿನಾಮೆ ಅಂಗೀಕರಿಸಿದ್ದೇವೆ - ಶರದ್ ಯಾದವ್
~ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕೋರಿ ಸಂಗ್ಮಾ ಅವರು ಕಳುಹಿಸಿರುವ ರಾಜಿನಾಮೆ ಪತ್ರವನ್ನು ತಾವು ಅಂಗೀಕರಿಸಿದ್ದೇವೆ~ ಎಂದು ಎನ್ಸಿಪಿಯ ನಾಯಕ ಶರದ್ ಯಾದವ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.