ತಿರುವನಂತಪುರ: ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮಲೆಯ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕೇರಳ ಸರ್ಕಾರ ಸುಪ್ರೀಂಕೋರ್ಟ್ಗೆ ಹೇಳಿದೆ.
ರಾಜ್ಯ ಸರ್ಕಾರದ ಈ ನಿಲುವನ್ನು ಟ್ರವಾಂಕೋರ್ ದೇವಸ್ವಮ್ ಮಂಡಳಿ ಕಟುವಾಗಿ ವಿರೋಧಿಸಿದೆ. ಸರ್ಕಾರ ತನಗೆ ಬೇಕಾದಂತೆ ನಿಲುವು ಬದಲಿಸುವುದು ಸರಿಯಲ್ಲ ಎಂದು ಮಂಡಳಿ ಹೇಳಿದೆ.
2007ರ ನವೆಂಬರ್ನಲ್ಲಿ ವಿ.ಎಸ್. ಅಚ್ಯುತಾನಂದನ್ ನೇತೃತ್ವದ ಅಂದಿನ ಎಲ್ಡಿಎಫ್ ಸರ್ಕಾರವು ದೇಗುಲಕ್ಕೆ ಮಹಿಳೆಯ ಪ್ರವೇಶದ ಪರವಾಗಿ ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ನಂತರ ಅಧಿಕಾರಕ್ಕೆ ಬಂದ ಉಮ್ಮನ್ ಚಾಂಡಿ ನೇತೃತ್ವದ ಯುಡಿಎಫ್ ಸರ್ಕಾರವು ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧವನ್ನು ಬೆಂಬಲಿಸಿತ್ತು.
ಸೋಮವಾರ ಸುಪ್ರೀಂಕೋರ್ಟ್ಗೆ ಹೇಳಿಕೆ ನೀಡಿರುವ ಕೇರಳ ಸರ್ಕಾರ ಈ ಹಿಂದೆ 2007ರ ನವೆಂಬರ್ನಲ್ಲಿ ಸಲ್ಲಿಸಿದ್ದ ಮೂಲ ಪ್ರಮಾಣ ಪತ್ರಕ್ಕೆ ತಾನು ಬದ್ಧವಾಗಿರುವುದಾಗಿ ತಿಳಿಸಿದೆ.
ಈ ಮಧ್ಯೆ ಟ್ರವಾಂಕೋರ್ ದೇವಸ್ವಮ್ ಮಂಡಳಿಯು ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆಂದು ಕೋರಿ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಮನವಿ ಸಲ್ಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.