ನವದೆಹಲಿ (ಪಿಟಿಐ): ಮತ್ತೊಂದು ತರಂಗಾಂತರ ಹಗರಣ ಭೂತ ಸರ್ಕಾರದ ಹೆಗಲೇರುವ ಲಕ್ಷಣಗಳು ಕಾಣುತ್ತಿರುವಾಗಲೇ ಇಸ್ರೊದ ಅಂತರಿಕ್ಷ್ ಹಾಗೂ ಬೆಂಗಳೂರು ಮೂಲದ ದೇವಾಸ್ ಮಲ್ಟಿಮೀಡಿಯಾ ನಡುವೆ ಏರ್ಪಟ್ಟಿದ್ದ ಎಸ್-ಬ್ಯಾಂಡ್ ನೀಡಿಕೆ ಒಪ್ಪಂದವನ್ನು ಕೇಂದ್ರ ಸರ್ಕಾರ ಮುಂದಿನ ವಾರ ರದ್ದುಗೊಳಿಸುವ ಸಾಧ್ಯತೆ ಇದೆ. ಬರುವ ವಾರ ನಡೆಯಲಿರುವ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಂದ ನಿರ್ಧಾರ ಕೈಗೊಳ್ಳಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಂತರಿಕ್ಷ್ ಮತ್ತು ಇಸ್ರೊದ ಮಾಜಿ ಅಧಿಕಾರಿ ಸ್ಥಾಪಿಸಿದ ದೇವಾಸ್ ಮಧ್ಯೆ 2005ರಲ್ಲಿ ಏರ್ಪಟ್ಟ ಒಪ್ಪಂದದಿಂದ ಬೊಕ್ಕಸಕ್ಕೆ ಯಾವುದೇ ನಷ್ಟವಾಗಿಲ್ಲ ಎಂದು ಇಸ್ರೊ ಮುಖ್ಯಸ್ಥ ಕೆ.ರಾಧಾಕೃಷ್ಣನ್ ಮಂಗಳವಾರ ಸಮರ್ಥಿಸಿಕೊಂಡಿದ್ದರು.ಈ ಒಪ್ಪಂದದಿಂದಾಗಿ ಜಿಸ್ಯಾಟ್ 6 ಮತ್ತು ಜಿಸ್ಯಾಟ್ 6ಎ ಉಪಗ್ರಹಗಳ ಶೇ 90ರಷ್ಟು ಟ್ರಾನ್ಸ್ಪಾಂಡರ್ಗಳ ಬಳಕೆ ಹಕ್ಕು ದೇವಾಸ್ ಪಾಲಾಗಲಿದೆ ಎಂಬ ಸಂಗತಿಯನ್ನು ಬಾಹ್ಯಾಕಾಶ ಆಯೋಗಕ್ಕಾಗಲೀ ಅಥವಾ ಕೇಂದ್ರ ಸಂಪುಟದ ಗಮನಕ್ಕಾಗಲೀ ತಂದಿರಲಿಲ್ಲ ಎಂಬುದನ್ನೂ ಈ ಸಂದರ್ಭದಲ್ಲಿ ರಾಧಾಕೃಷ್ಣನ್ ಒಪ್ಪಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.