ADVERTISEMENT

ಒಕ್ಕೂಟ ವ್ಯವಸ್ಥೆಗೆ ಧಕ್ಕೆ:ಅಡ್ವಾಣಿ ಟೀಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಸಂಬಲ್‌ಪುರ,ಒಡಿಶಾ(ಪಿಟಿಐ): ಕಾಂಗ್ರೆಸೇತರ ಸರ್ಕಾರಗಳ ಬಗ್ಗೆ ತಾರತಮ್ಯ ತೋರುವ ಮೂಲಕ ಕೇಂದ್ರದ ಯುಪಿಎ ಸರ್ಕಾರ ಸಂವಿಧಾನ ಬದ್ಧವಾಗಿರುವ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಆರೋಪಿಸಿದರು.

ತಮ್ಮ `ಜನಚೇತನ ಯಾತ್ರೆ~ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ತನಿಖಾ ದಳಗಳನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸೇತರ ಸರ್ಕಾರಗಳ ವಿರುದ್ಧ ಅವುಗಳನ್ನು ಎತ್ತಿಕಟ್ಟಿದೆ ಎಂದು ದೂರಿದರು.

`ಯುಪಿಎ ಸರ್ಕಾರಕ್ಕೆ ಅಧಿಕಾರದ ಗರ್ವ ಎಷ್ಟಿದೆ ಎಂದರೆ, ಪ್ರಧಾನಿ ಮೂಗಿನ ನೇರದಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ~ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಕಳೆದ ವಾರ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಪ್ರಧಾನ ಮಂತ್ರಿಗಳು ತೀವ್ರ ಮುಜುಗರ ಎದುರಿಸುವ ಪ್ರಸಂಗ ಎದುರಾಯಿತು ಎಂದರು.

ಯುಪಿಎ ಅಂಗಪಕ್ಷವಾದ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಅವರು ತೀಸ್ತಾ ನದಿ ನೀರು ಹಂಚಿಕೆ ವಿಷಯದಲ್ಲಿ ತಮ್ಮನ್ನು ಸಂಪರ್ಕಿಸದೇ ಇರುವುದನ್ನು ಆಕ್ಷೇಪಿಸಿದರು ಎನ್ನುವುದನ್ನು ಗಮನಿಸಬೇಕಾದ ಅಂಶ ಎಂದರು.

ಸರ್ಕಾರ ನಡೆಸುತ್ತಿರುವವರು ಯಾರು?: ಕೇಂದ್ರ ಸರ್ಕಾರದಲ್ಲಿ ಯಾರು ನಂಬರ್ ಒನ್ ಎನ್ನುವುದು ಪ್ರಶ್ನಾರ್ಹವಾಗಿದೆ. ವಾಸ್ತವವಾಗಿ ಪ್ರಧಾನ ಮಂತ್ರಿಗಳೇ ನಂಬರ್ ಒನ್ ಆಗಿದ್ದರೂ ಸಹ, ಸಂಪುಟದ ನಿರ್ಣಯಗಳನ್ನು 10 ಜನ್‌ಪಥ್ (ಸೋನಿಯಾ ಗಾಂಧಿ ನಿವಾಸ)ನಿಂದಲೇ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಮೈತ್ರಿ ಮುರಿದ ಬಿಜೆಡಿ: ಯಾವುದೇ ಸಮರ್ಥನೆ ಇಲ್ಲದೆಯೇ ಮಿತ್ರ ಪಕ್ಷವಾದ ಬಿಜೆಡಿ ಬಿಜೆಪಿಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದು, ರಾಜ್ಯದಲ್ಲಿ ಎರಡೂ ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲವಾಗಿದೆ ಎಂದು ಅಡ್ವಾಣಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಕೆಲವು ವರ್ಷಗಳಿಂದ ಮಿತ್ರ ಪಕ್ಷವಾಗಿದ್ದ ಬಿಜೆಡಿ ಈಗ ಸಂಬಂಧ ಕಡಿದುಕೊಂಡಿರುವುದು ವಿಷಾದಕರ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.