ADVERTISEMENT

ಒಡಿಶಾ: ಅಪಹೃತ ಡಿ.ಸಿ ಬಿಡುಗಡೆ ಇನ್ನೂ ತಡ?

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 17:30 IST
Last Updated 23 ಫೆಬ್ರುವರಿ 2011, 17:30 IST
ಒಡಿಶಾ: ಅಪಹೃತ ಡಿ.ಸಿ ಬಿಡುಗಡೆ ಇನ್ನೂ ತಡ?
ಒಡಿಶಾ: ಅಪಹೃತ ಡಿ.ಸಿ ಬಿಡುಗಡೆ ಇನ್ನೂ ತಡ?   

ಭುವನೇಶ್ವರ (ಪಿಟಿಐ): ಒಂದು ವಾರದ ಹಿಂದೆ ಒಡಿಶಾ ಜಿಲ್ಲಾಧಿಕಾರಿ ವಿನೀಲ್ ಕೃಷ್ಣ ಅವರೊಡನೆ ಅಪಹೃತರಾಗಿದ್ದ ಕಿರಿಯ ಎಂಜಿನಿಯರ್ ಪವಿತ್ರ ಮಝಿ ಅವರನ್ನು ನಕ್ಸಲರು ಬುಧವಾರ ಬಿಡುಗಡೆ ಮಾಡಿದ್ದಾರೆ.

ಕೃಷ್ಣ ಅವರೂ ಶೀಘ್ರವೇ ಮನೆಗೆ ವಾಪಸಾಗುವುದಾಗಿ ಸರ್ಕಾರ ಹೇಳಿದೆ. ಆದರೆ ಈವರೆಗೂ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದು ಜಿಲ್ಲಾಧಿಕಾರಿ ಬಿಡುಗಡೆ ಇನ್ನಷ್ಟು ತಡವಾಗಬಹುದು ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಝಿ, ಜಿಲ್ಲಾಧಿಕಾರಿ ಆರೋಗ್ಯದಿಂದಿದ್ದು 48 ಗಂಟೆಗಳೊಳಗೆ ಬಿಡುಗಡೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ನಕ್ಸಲರು ಅಪಹರಿಸಿದ ನಂತರ ತಮ್ಮನ್ನು ಯಾವ ಸ್ಥಳದಲ್ಲಿ ಇರಿಸಿದ್ದರು ಎಂಬುದು ಗೊತ್ತಿಲ್ಲ. ತಿನ್ನಲು ದಾಲ್ ಮತ್ತು ಅನ್ನ ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಬುಧವಾರ ಬೆಳಿಗ್ಗೆ ಅಪಹೃತರಲ್ಲಿ ಯಾರೊಬ್ಬರ ಸುಳಿವೂ ಕಂಡುಬರಲಿಲ್ಲವಾದ್ದರಿಂದ ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿದ್ದವರಿಗೆ ಆತಂಕ ಉಂಟಾಗಿತ್ತು. ಸಂಧಾನದ ನೇತೃತ್ವದ ವಹಿಸಿದ್ದ ಪ್ರೊಫೆಸರ್ ಜಿ.ಹರಗೋಪಾಲ್ ಸೇರಿದಂತೆ ಮೂವರು ಪ್ರಮುಖ ಸಂಧಾನಕಾರರು ಕೂಡ ಈ ಆತಂಕದಿಂದ ಹೊರತಾಗಿರಲಿಲ್ಲ. ಹಿರಿಯ ನಕ್ಸಲ್ ನಾಯಕ ಗಂಟಿ ಪ್ರಸಾದ್ ಅವರ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಯನ್ನು ಈ ಸಂಧಾನ ಒಳಗೊಂಡಿದ್ದು, ಇದೇ ವೇಳೆ ಒರಿಸ್ಸಾ ಹೈಕೋರ್ಟ್ ಬುಧವಾರ ಗಂಟಿ ಅವರಿಗೆ ಜಾಮೀನು ನೀಡಿದೆ.

ಆದರೆ, ಜೈಲಿನಲ್ಲಿರುವ ಎಲ್ಲ 627 ಆದಿವಾಸಿಗಳನ್ನು ಬಿಡುಗಡೆ ಮಾಡುವವರೆಗೆ  ಜೈಲಿನಲ್ಲೇ ಇರಲು ಗಂಟಿ ಪ್ರಸಾದ್ ನಿರ್ಧರಿಸಿದ್ದಾರೆ ಎಂದು ಮಾವೊವಾದಿಗಳ ಪರ ಸಂಧಾನಕಾರರಾಗಿ ತೆರಳಿದ್ದ ದಂಡಪಾಣಿ ಮೊಹಂತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.