ಜೋಧಪುರ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಅಕ್ರಮವಾಗಿ ಕೂಡಿ ಹಾಕಿದ ಮತ್ತು ಕ್ರಿಮಿನಲ್ ಸಂಚು ರೂಪಿಸಿದ ಆರೋಪದಲ್ಲಿ ಜೋಧಪುರದ ಸೆಂಟ್ರಲ್ ಜೈಲಿನಲ್ಲಿರುವ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪು ನಡೆಸಿದ ಫೋನ್ ಸಂಭಾಷಣೆಯ ಆಡಿಯೋ ಕ್ಲಿಪ್ ವೈರಲ್ ಆಗಿದೆ.
ಈ ಆಡಿಯೋ ಕ್ಲಿಪ್ನಲ್ಲಿ ಆಸಾರಾಂ ಬಾಪು ವ್ಯಕ್ತಿಯೊಬ್ಬರಲ್ಲಿ ಒಳ್ಳೆ ದಿನಗಳು ಬರಲಿವೆ ಎಂದು ಹೇಳಿದ್ದಾರೆ.
ಜೋಧಪುರ ಸೆಂಟ್ರಲ್ ಜೈಲ್ ಡಿಐಜಿ ವಿಕ್ರಂ ಸಿಂಗ್ ಪ್ರಕಾರ ಆಸಾರಾಂ ಅವರು ಶ್ರುಕವಾರ ಫೋನ್ ಸಂಭಾಷಣೆ ನಡೆಸಿದಾಗ ರೆಕಾರ್ಡ್ ಮಾಡಿದ ಆಡಿಯೊ ಕ್ಲಿಪ್ ಆಗಿದೆ ಅದು. ಈ ಆಡಿಯೊ ಕ್ಲಿಪ್ 15 ನಿಮಿಷ ಅವಧಿಯದ್ದಾಗಿದೆ, ಜೈಲು ಅಧಿಕಾರಿಗಳ ಅನುಮತಿ ಪಡೆದೇ ಆಸಾರಾಂ ಈ ಫೋನ್ ಕರೆ ಮಾಡಿದ್ದಾರೆ.
ತಿಂಗಳಲ್ಲಿ ಎರಡು ದೂರವಾಣಿ ಸಂಖ್ಯೆಗಳಿಗೆ ಫೋನ್ ಕರೆ ಮಾಡಿ 80 ನಿಮಿಷ ಮಾತನಾಡುವ ಅವಕಾಶ ಇದೆ. ಆಸಾರಾಂ ಅವರು ಶುಕ್ರವಾರ ಸಂಜೆ 6.30 ಕ್ಕೆ ಸಬರಮತಿ ಆಶ್ರಮದ ಸಾಧಕ್ಗೆ ಕರೆ ಮಾಡಿದ್ದಾರೆ. ಅವರ ಫೋನ್ ಸಂಭಾಷಣೆ ರೆಕಾರ್ಡ್ ಆಗಿದ್ದು, ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು ಸಿಂಗ್ ಹೇಳಿದ್ದಾರೆ.
ಆಡಿಯೊ ಕ್ಲಿಪ್ನಲ್ಲಿ ಏನಿದೆ?
ನಾವು ಕಾನೂನನ್ನು ಗೌರವಿಸಬೇಕಿದೆ, ನಾನು ಅದನ್ನು ಗೌರವಿಸುತ್ತೇನೆ. ಕೆಲವೊಬ್ಬರು ನಮ್ಮ ಆಶ್ರಮದ ವಿರುದ್ಧ ಅಪಪ್ರಚಾರ ಮಾಡಿ ಆಶ್ರಮದ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದ್ದಾರೆ. ಆ ರೀತಿಯ ಮಾತುಗಳನ್ನು ನಂಬಬೇಡಿ.
ಆಸಾರಾಂ ಪ್ರಕರಣದಲ್ಲಿ ಸಹ ಆರೋಪಿಗಳಾಗಿರುವ ಶಿಲ್ಪಿ ಮತ್ತ ಶರತ್ ಚಂದ ಬಗ್ಗೆ ಮಾತನಾಡಿದ ಆಸಾರಾಂ, ಅವರಿಬ್ಬರನ್ನು ಮೊದಲು ಬಂಧಮುಕ್ತಗೊಳಿಸಲು ನೋಡಿ. ತಮ್ಮ ಮಕ್ಕಳ ಬಗ್ಗೆ ಮೊದಲು ಯೋಚಿಸುವುದು ಹೆತ್ತವರ ಧರ್ಮ. ಶಿಲ್ಪಿ ಮತ್ತು ಶರತ್ ಅವರನ್ನು ಬಿಡುಗಡೆಗೊಳಿಸಲು ಹೆಚ್ಚಿನ ವಕೀಲರು ಬೇಕಿದ್ದರೆ ಅದಕ್ಕೂ ವ್ಯವಸ್ಥೆ ಮಾಡಿ, ಅದರ ನಂತರ ನನ್ನ ಬಗ್ಗೆ ಯೋಚಿಸಿದರೆ ಸಾಕು.
ಹೈಕೋರ್ಟ್ ನಲ್ಲಿ ಏನಾದರೂ ತಪ್ಪಾಗಿದ್ದರೆ, ಸುಪ್ರೀಂಕೋರ್ಟ್ ನಲ್ಲಿ ಆ ತಪ್ಪನ್ನು ತಿದ್ದಿಕೊಳ್ಳಬಹುದು. ಸತ್ಯ ಯಾವತ್ತೂ ಮುಕ್ತವಾಗಿರುತ್ತದೆ ಮತ್ತು ಸುಳ್ಳಿಗೆ ನೆಲೆ ಇರುವುದಿಲ್ಲ. ಯಾವುದೇ ಆರೋಪಗಳು ಬಂದರೂ ಅದೆಲ್ಲವೂ ಗೌಣ, ಒಳ್ಳೆಯ ದಿನಗಳು ಬರಲಿವೆ. ಫೋನ್ ಸಂಭಾಷಣೆಯ ಕೊನೆಯಲ್ಲಿ ಶರತ್ ಮಾತನಾಡಿದ್ದು, ಜೈಲಿನಲ್ಲಿ ಯಾವುದರ ಬಗ್ಗೆಯೂ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.