
ಪಟ್ನಾ: ಬಿಹಾರದ ಮುಜಾಫರ್ಪುರ್ನಲ್ಲಿ ಭಾನುವಾರ ನಡೆದ ಸೇನಾ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ವೇಳೆ ನಕಲು ಮಾಡಬಾರದು ಎಂದು ಅಭ್ಯರ್ಥಿಗಳ ಬಟ್ಟೆ ಬಿಚ್ಚಿಸಿ, ಕೇವಲ ಒಳ ಉಡುಪಿನಲ್ಲಿ, ಬಯಲಿನಲ್ಲಿ ಕೂರಿಸಿ ಪರೀಕ್ಷೆ ಬರೆಯಿಸಿದ ಘಟನೆ ನಡೆದಿದೆ.
ಸೇನಾ ಅಧಿಕಾರಿಗಳ ಈ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಪಟ್ನಾ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಲು ಮುಂದಾಗಿದೆ.
ಭಾನುವಾರ ಸೇನೆ ನಡೆಸಿದ ‘ಗುಮಾಸ್ತ’ ಹುದ್ದೆಯ ಲಿಖಿತ ಪರೀಕ್ಷೆಗೆ ಸುಮಾರು 1,200 ಮಂದಿ ಹಾಜರಾಗಿದ್ದರು. ಆದರೆ, ಕಳೆದ ಬಾರಿ ನಡೆದ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲು ನಡೆದಿತ್ತು. ಇದನ್ನು ತಡೆಗಟ್ಟಲು ಈ ಬಾರಿ ಅಧಿಕಾರಿಗಳು, ಅಭ್ಯರ್ಥಿಗಳಿಗೆ ಬಟ್ಟೆ ಬಿಚ್ಚಿ, ಬರಿ ಮೈನಲ್ಲಿ ಬಯಲಲ್ಲಿ ಕುಳಿತು ಪರೀಕ್ಷೆ ಬರೆಯುವಂತೆ ಸೂಚಿಸಿದರು. ಕೇವಲ ಚಡ್ಡಿ ಮಾತ್ರ ಹಾಕಿಕೊಂಡು ಅಭ್ಯರ್ಥಿಗಳು ಪರೀಕ್ಷೆ ಬರೆದರು.
ಉಡುಪಿನಲ್ಲಿ ಅಡಗಿಸಿಟ್ಟುಕೊಂಡು ಚೀಟಿ ತಂದು ನಕಲು ಮಾಡುತ್ತಾರೆ ಎಂಬ ಕಾರಣಕ್ಕೆ ಬನಿಯನ್ ಕೂಡ ಹಾಕಲು ಅವಕಾಶ ನೀಡಲಿಲ್ಲ. ಕುರ್ಚಿ , ಮೇಜು ಇದ್ದರೆ ನಕಲು ಮಾಡಲು ಹೆಚ್ಚಿನ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಅದನ್ನೂ ನಿರಾಕರಿಸಲಾಯಿತು. ಕೊನೆಯ ಕ್ಷಣದಲ್ಲಿ ಹೀಗೆ ಮಾಡಿದ್ದರಿಂದ, ಬೇರೆ ದಾರಿಯಿಲ್ಲದೆ ಅವರು ಹೇಳಿದಂತೆ ಕೇಳಿದೆವು ಎಂದು ಅಭ್ಯರ್ಥಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.