ADVERTISEMENT

ಕನಸಲ್ಲಿ ಶಿವ ದರ್ಶನ: ದೇವರ ಅಣತಿಯಂತೆ ರಾಷ್ಟ್ರೀಯ ಹೆದ್ದಾರಿಯನ್ನು ಅಗೆದು ಶಿವಲಿಂಗಕ್ಕಾಗಿ ಶೋಧ ನಡೆಸಿದ ಭಕ್ತ!

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 10:28 IST
Last Updated 6 ಜೂನ್ 2017, 10:28 IST
ಕೃಪೆ: ಆಶಿಶ್ ಪಾಂಡೆ
ಕೃಪೆ: ಆಶಿಶ್ ಪಾಂಡೆ   

ಹೈದರಾಬಾದ್: ಶಿವಲಿಂಗವನ್ನು ಪತ್ತೆ ಹಚ್ಚುವುದಕ್ಕಾಗಿ ವ್ಯಕ್ತಿಯೊಬ್ಬ ರಾಷ್ಟ್ರೀಯ ಹೆದ್ದಾರಿಯನ್ನೇ ಅಗೆದ ಘಟನೆ ತೆಲಂಗಾಣದಲ್ಲಿ ನಡೆದಿದೆ,

ಇಲ್ಲಿನ ಗುಂಡ್ಲಗುಡ್ಡ ನಿವಾಸಿಯಾದ ಲಖನ್ ಮನೋಜ್ ಎಂಬ ವ್ಯಕ್ತಿ ಶಿವ ಭಕ್ತ. ಒಂದು ದಿನ ಈತನ ಕನಸಿನಲ್ಲಿ ಬಂದ ಶಿವ, ವಾರಾಂಗಲ್- ಹೈದರಬಾದ್ ರಾಷ್ಟ್ರೀಯ ಹೆದ್ದಾರಿಯಡಿಯಲ್ಲಿ ಶಿವಲಿಂಗವೊಂದು ಇದೆ ಎಂದು ಹೇಳಿದಾಗ, ಮನೋಜ್ ಆ ಕನಸನ್ನು ಬರೀ ಕನಸು ಎಂದು ತಳ್ಳಿ ಹಾಕಲಿಲ್ಲ.

ಶಿವಲಿಂಗ ಪತ್ತೆಗಾಗಿ ಮನೋಜ್ ರಾಷ್ಟ್ರೀಯ ಹೆದ್ದಾರಿಯನ್ನೇ ಅಗೆದಿದ್ದಾರೆ. ಸೋಮವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಶಿವಲಿಂಗ ಶೋಧ ಕಾರ್ಯಕ್ರಮ ಆರಂಭವಾಗಿದೆ, ಈತನೊಂದಿಗೆ ಗ್ರಾಮಸ್ಥರು ಕೂಡಾ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ADVERTISEMENT

30 ವರ್ಷದ ಮನೋಜ್‍ಗೆ ಕಳೆದ ಮೂರು ವರ್ಷದಿಂದ ಕನಸಿನಲ್ಲಿ ಶಿವ ದರ್ಶನವಾಗುತ್ತಿತ್ತಂತೆ. ಕನಸಿನಲ್ಲಿ ಬಂದ ಶಿವ ಹೆದ್ದಾರಿಯಡಿಯಲ್ಲಿ ಶಿವಲಿಂಗವಿದೆ. ಅದನ್ನು ಅಗೆದು ತೆಗೆದು ಅಲ್ಲೊಂದು ದೇವಾಲಯ ನಿರ್ಮಿಸಬೇಕು ಎಂದು ಹೇಳಿರುವುದಾಗಿ ದ ಹಿಂದೂ ಪತ್ರಿಕೆ ಜತೆ ಮಾತನಾಡಿದ ಜನಗಾಂವ್ ಬಾಲ್ನೆ ಸಿದ್ದು ಲಿಂಗಂ ಸರ್ಪಂಚ್  ಹೇಳಿದ್ದಾರೆ.

ಮನೋಜ್ ಅವರು ಪ್ರತೀ ಸೋಮವಾರ ಶಿವಲಿಂಗ ಇದೆ ಎಂದು ಹೇಳಲಾಗುತ್ತಿರುವ ಜಾಗಕ್ಕೆ ಪೂಜೆ ಸಲ್ಲಿಸುತ್ತಿದ್ದರು. ನಿನ್ನೆ (ಸೋಮವಾರ) 20 ಅಡಿ ಆಳದ ಹೊಂಡ ತೋಡಿದರೂ ಶಿವಲಿಂಗವೇನೂ ಸಿಗಲಿಲ್ಲ. ರಾಷ್ಟ್ರೀಯ ಹೆದ್ದಾರಿ ಅಗೆದ ಕಾರಣ ಟ್ರಾಫಿಕ್ ಸಮಸ್ಯೆಯೂ ಉಂಟಾಗಿತ್ತು. ಕೊನೆಗೆ ತೆಲಂಗಾಣ ಪೊಲೀಸರು ಬಂದು ಮನೋಜ್ ಅವರನ್ನು ಬಂಧಿಸಿದ್ದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಕ್ಕಾಗಿ ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.