ನವದೆಹಲಿ (ಪಿಟಿಐ): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಪ್ಪು ಹಣದ ಚಲಾವಣೆ ತಡೆಯಲು ಹಣಕಾಸು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ರಚಿಸಿದೆ.
ಇದರಿಂದ ಅಕ್ರಮ ಹಣ ಎಲ್ಲೆಲ್ಲಿ ಚಲಾವಣೆಯಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ.
ಹಣಕಾಸು ಮತ್ತು ಬೇಹುಗಾರಿಕೆ ಇಲಾಖೆಯ ತಲಾ 10 ಅಧಿಕಾರಿಗಳು ಈ ಜಾಲದಲ್ಲಿ ಕಾರ್ಯನಿರ್ವಹಿಸು ತ್ತಾರೆ. ಇವರು ನವದೆಹಲಿಯ ಚುನಾ ವಣಾ ಆಯೋಗದ ಕಚೇರಿಯಲ್ಲಿ ವಾರಕ್ಕೆ ಎರಡು ಬಾರಿ ಸಭೆ ಸೇರಲಿ ದ್ದಾರೆ. ಶಂಕಿತ ಹಣ ವರ್ಗಾವಣೆಯ ಕುರಿತು ಎಚ್ಚರಿಕೆ ವಹಿಸುವ ಕ್ರಮಗಳನ್ನು ಕೈಗೊಳ್ಳುತ್ತಾರೆ.
ಈ ಜಾಲದಲ್ಲಿ ಕಾರ್ಯನಿರ್ವಹಿಸುವ ಇತರ ಇಲಾಖೆಗಳೆಂದರೆ, ಆದಾಯ ತೆರಿಗೆ ಬೇಹುಗಾರಿಕೆ ಮತ್ತು ತನಿಖೆ ವಿಭಾಗ, ಹಣಕಾಸು ಇಲಾಖೆ ಬೇಹುಗಾರಿಕೆ ಘಟಕ, ಕಂದಾಯ ಇಲಾಖೆ ಬೇಹುಗಾರಿಕೆ ನಿರ್ದೇಶ ನಾಲಯ, ಕೇಂದ್ರ ಆರ್ಥಿಕ ಬೇಹುಗಾರಿಕೆ ಬ್ಯುರೊ, ಮಾದಕವಸ್ತು ನಿಯಂತ್ರಣ ಬ್ಯುರೊ ಮತ್ತು ಸಶಸ್ತ್ರ ಸೀಮಾಬಲ ಮತ್ತು ಗಡಿ ಭದ್ರತಾ ಪಡೆಯ ತನಿಖಾ ವಿಭಾಗ ಹಾಗೂ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ ಮತ್ತು ಭಾರತೀಯ ರೈಲ್ವೆ ಭದ್ರತಾ ಪಡೆಗಳು.
ಈ ಇಲಾಖೆಗಳ ಬೇಹುಗಾರಿಕೆ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿ ಗಳು ಚುನಾವಣಾ ಆಯೋಗದ ಮುಖ್ಯಕಚೇರಿಯಲ್ಲಿ ವಾರಕ್ಕೆ ಎರಡು ಬಾರಿ ಸಭೆ ಸೇರಿ ಕಪ್ಪು ಹಣ ಚಲಾವಣೆ ತಡೆಗೆ ಚುನಾವಣಾ ಆಯೋಗ ಕೈಗೊಂಡ ಕ್ರಮಗಳಲ್ಲಿ ಯಾವವು ಪಾಲನೆಯಾಗಿವೆ ಎಂಬ ಬಗ್ಗೆ ಪರಾಮರ್ಶೆ ನಡೆಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಭೆಯ ವರದಿಯನ್ನು ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ.
ಹಣಕಾಸು ಇಲಾಖೆಯ ಜತೆ ಗಡಿ ಭದ್ರತಾ ಪಡೆಯ ಬೇಹುಗಾರಿಕೆ ವಿಭಾಗವು ಹಣಕಾಸಿನ ಚಲಾವಣೆ, ನಕಲಿ ನೋಟುಗಳ ಹಾವಳಿ ಹಾಗೂ ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ನಡೆಯಬಹುದಾದ ಮಾದಕವಸ್ತುಗಳ ಸಾಗಣೆ ಬಗ್ಗೆಯೂ ಕಣ್ಣಿಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.