ADVERTISEMENT

ಕಬ್ಬು: ₹ 14 ಸಾವಿರ ಕೋಟಿ ಬಾಕಿ

ಪಿಟಿಐ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಜನವರಿ ಅಂತ್ಯದವರೆಗೆ ₹ 14 ಸಾವಿರ ಕೋಟಿಗಳಷ್ಟು ಬಾಕಿ ಉಳಿಸಿಕೊಂಡಿವೆ.

‘2017–18ರ ಸಕ್ಕರೆ ಮಾರುಕಟ್ಟೆ ಋತುವಿನಲ್ಲಿ ಜನವರಿ 31ರವರೆಗೆ ಕಾರ್ಖಾನೆಗಳು ₹ 13,931 ಕೋಟಿಗಳಷ್ಟು ಬಾಕಿ ಉಳಿಸಿಕೊಂಡಿವೆ’ ಎಂದು ಆಹಾರ ಮತ್ತು  ಸಾರ್ವಜನಿಕ ಪಡಿತರ ವಿತರಣೆ ರಾಜ್ಯ ಸಚಿವ ಸಿ. ಆರ್‌. ಚೌಧರಿ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಬಾಕಿ ಉಳಿಸಿಕೊಂಡಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ, ಕರ್ನಾಟಕ (ದ್ವಿತೀಯ) ಮತ್ತು ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿ ಇವೆ.

ADVERTISEMENT

‘ಕಾರ್ಖಾನೆಗಳು 2016–17ರ ವರ್ಷದಲ್ಲಿ ₹ 902 ಕೋಟಿ ಮತ್ತು ಅದಕ್ಕೂ ಹಿಂದಿನ ವರ್ಷಗಳಿಗೆ ಸಂಬಂಧಿಸಿದಂತೆ ₹ 1,686 ಕೋಟಿಗಳಷ್ಟು ಬಾಕಿ ಉಳಿಸಿಕೊಂಡಿವೆ. ಹಳೆಯದನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಬೆಳೆಗಾರರಿಗೆ ಪಾವತಿಸಬೇಕಾದ ಒಟ್ಟು ಮೊತ್ತವು ₹ 16,520 ಕೋಟಿಗಳಷ್ಟಾಗುತ್ತದೆ. ಇದರಲ್ಲಿ ಉತ್ತರ ಪ್ರದೇಶದ ಪಾಲು ₹ 6,078 ಕೋಟಿಗಳಷ್ಟು ಇದೆ.

‘ಸಕ್ಕರೆ (ನಿಯಂತ್ರಣ) ಆದೇಶ 1966ರ ಪ್ರಕಾರ, ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ 14 ದಿನಗಳಲ್ಲಿ ಬೆಳೆಗಾರರಿಗೆ ಹಣ ಪಾವತಿ ಮಾಡುವುದು ಕಡ್ಡಾಯವಾಗಿದೆ. ವಿಳಂಬ ಮಾಡಿದರೆ ಶೇ 15ರಷ್ಟು ಬಡ್ಡಿ  ಸೇರಿಸಿ ಬಾಕಿ ಪಾವತಿಸಬೇಕಾಗುತ್ತದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳ ಬಳಿ ಇದೆ. ಬಾಕಿ ಮರುಪಾವತಿಗೆ ಕ್ರಮ ಕೈಗೊಳ್ಳಲು ಮೂರೂ ರಾಜ್ಯಗಳು ಕಾರ್ಖಾನೆಗಳಿಗೆ ನೋಟಿಸ್ ಜಾರಿಗೆ ಮಾಡಿವೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.