ನವದೆಹಲಿ (ಪಿಟಿಐ): ಕಲ್ಲಿದ್ದಲು ಗಣಿಗಾರಿಕೆಯ ಪರವಾನಗಿಗಳ ಮೇಲೆ ನಿರ್ಬಂಧ ವಿಧಿಸಿರುವುದೇ ಕಲ್ಲಿದ್ದಲು ಕ್ಷಾಮಕ್ಕೆ ಕಾರಣ ಎಂಬ ಆರೋಪವನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವೆ ಜಯಂತಿ ನಟರಾಜನ್ ತಳ್ಳಿಹಾಕಿದ್ದಾರೆ.
`ಎಷ್ಟು ಇಂಧನ ಉತ್ಪಾದಿಸಬೇಕಿತ್ತೋ ಅಷ್ಟು ಪರವಾನಗಿಯನ್ನು ನೀಡಲಾಗಿದೆ~ ಎಂದು ಅವರು ಹೇಳಿದ್ದಾರೆ. ಹುಲಿ ಅಭಯಾರಣ್ಯ ವಲಯದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ತಡೆ ನೀಡುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಜಾರಿ ಮಾಡಲಾಗಿದೆ ಎಂದಿರುವ ಅವರು, `ನಾವು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸ್ದ್ದಿದ್ದೇವೆ ಅಷ್ಟೇ~ ಎಂದಿದ್ದಾರೆ.
12ನೇ ಪಂಚವಾರ್ಷಿಕ ಯೋಜನೆ (2012-17) ರನ್ವಯ ಎಷ್ಟು ಕಲ್ಲಿದ್ದಲು ಪರವಾನಗಿಗಳನ್ನು ನೀಡಬೇಕಿತ್ತೋ ಅವುಗಳಲ್ಲಿ ಕೆಲವನ್ನು ಈಗಾಗಲೇ ನೀಡಲಾಗಿದ್ದು. ಇನ್ನೂ ಉಳಿದ ಗಣಿಗಾರಿಕೆಗೆ ಪರವಾನಗಿಗಳನ್ನು ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ವಲಯದ ಕಲ್ಲಿದ್ದಲು ಗಣಿ ಸಂಸ್ಥೆಯಾದ ಕೋಲ್ ಇಂಡಿಯಾ ಸಂಸ್ಥೆಯು ದೇಶಕ್ಕೆ ಬೇಕಾಗುವ ಇಂಧನ ಉತ್ಪಾದನೆಗೆ ಸಾಕಷ್ಟು ಕಲ್ಲಿದ್ದಲು ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ತೀಕ್ಷ್ಣವಾದ ಪತ್ರವನ್ನು ಬರೆದಿರುವ ಬಗ್ಗೆ ಹೇಳಿಕೆಯನ್ನು ನೀಡಿರುವ ಸಚಿವರು, ಕಲ್ಲಿದ್ದಲು `ಕೊರತೆಗೆ ಪರಿಸರ ಸಚಿವಾಲಯ ಕಾರಣವಲ್ಲ~ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.