ADVERTISEMENT

ಕಲ್ಲಿದ್ದಲು ಸಚಿವಾಲಯದಿಂದ ಸಿಬಿಐಗೆ ದಾಖಲೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖೆ ಕೈಗೊಂಡಿರುವ ಸಿಬಿಐಗೆ   ದಾಖಲೆಗಳನ್ನು ಒಳಗೊಂಡ ಹೊಸ ಕಡತಗಳನ್ನು ಕಲ್ಲಿದ್ದಲು ಸಚಿವಾಲಯ ಸೋಮವಾರ ಸಲ್ಲಿಸಿದೆ.

‘ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒಳಗೊಂಡ ಸುಮಾರು 150 ಹೊಸ ಕಡತಗಳು ಸೋಮವಾರ ಸಂಜೆಯಷ್ಟೆ ನಮ್ಮ ಕೈಸೇರಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಈ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್‌ ಜೈಸ್ವಾಲ್‌, ‘ಸುಪ್ರೀಂಕೋರ್ಟ್ ನೀಡಿದ ನಿರ್ದೇಶನಗಳನ್ನು ಪಾಲಿಸಲಾಗಿದೆ’ ಎಂದಷ್ಟೆ ತಿಳಿಸಿದರು.

ಹಗರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 29ರಂದು ಸುಪ್ರೀಂಕೋರ್ಟ್‌ ವಿಚಾರಣೆ ಕೈಗೊಂಡಿತ್ತು. ‘ತನಿಖೆಗೆ ಅಗತ್ಯವಾದ ದಾಖಲೆಗಳ ಪಟ್ಟಿಯನ್ನು ಸಿಬಿಐ ಕಲ್ಲಿದ್ದಲು ಸಚಿವಾಲಯಕ್ಕೆ ಐದು ದಿನದಲ್ಲಿ ನೀಡಬೇಕು. ಈ ದಾಖಲೆಗಳನ್ನು ಸಚಿವಾಲಯ ಎರಡು ವಾರದೊಳಗೆ ಸಿಬಿಐಗೆ ನೀಡಬೇಕು’ ಎಂದು ಕೋರ್ಟ್‌ ಸೂಚನೆ ನೀಡಿತ್ತು.

ಹಗರಣಕ್ಕೆ ಸಂಬಂಧಿಸಿದಂತೆ ಕಣ್ಮರೆಯಾಗಿರುವ ಕಡತಗಳ ಕುರಿತು ಸಚಿವಾಲಯ ಸಿಬಿಐಗೆ ಯಾವಾಗ ದೂರು ಸಲ್ಲಿಸುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವಾಲಯದ ಅಧಿಕಾರಿ, ‘ಕಾನೂನು ಪ್ರಕಾರ ಹಾಗೂ ಸುಪ್ರೀಂಕೋರ್ಟ್‌ ಕಾಲಕಾಲಕ್ಕೆ ನೀಡುವ ನಿರ್ದೇಶನಗಳ ಅನ್ವಯ ನಾವು ಕ್ರಮ ಕೈಗೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.