ರಾಯಪುರ: ‘ಕಾಂಗ್ರೆಸ್ಮುಕ್ತ ಭಾರತ’ ಎಂಬ ಬಿಜೆಪಿಯ ಘೋಷಣೆಯ ಅರ್ಥ ಆ ಪಕ್ಷದ ಸಂಸ್ಕೃತಿಯಿಂದ ದೇಶವನ್ನು ಬಿಡಿಸುವುದಾಗಿದೆ. ವಿರೋಧ ಪಕ್ಷವಿಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ನೀಡಿರುವ ಹೇಳಿಕೆಗಳನ್ನು ವೈಯಕ್ತಿಕ ಟೀಕೆ ಎಂದು ಪರಿಗಣಿಸಬಾರದು. ರಾಹುಲ್ ಅವರು ಮುಂದಿಟ್ಟ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕಾಗಿ ಮಾತ್ರ ಈ ರೀತಿ ಹೇಳಲಾಗಿದೆ ಎಂದು ಶಾ ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ನಿರ್ಣಾಯಕ ಪಾತ್ರ ಇದೆ. ಆದರೆ ಕಾಂಗ್ರೆಸ್ ದಿನೇ ದಿನೇ ಕುಗ್ಗುತ್ತಲೇ ಹೋಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಜೀವಂತವಾಗಿ ಇರಿಸುವುದು ರಾಹುಲ್ ಗಾಂಧಿಯವರ ಹೊಣೆಯೇ ಹೊರತು ತಮ್ಮದಲ್ಲ ಎಂದು ಶಾ ಹೇಳಿದರು.
ಛತ್ತೀಸಗಡದ ಅಂಬಿಕಾಪುರ ಪಟ್ಟಣದಲ್ಲಿ ಅವರು ಮಾತನಾಡಿದರು.
‘55 ವರ್ಷಗಳಲ್ಲಿ ಕಾಂಗ್ರೆಸ್ನ ನಾಲ್ಕು ತಲೆಮಾರು ದೇಶವನ್ನು ಆಳಿದೆ. ಈ ಅವಧಿಯಲ್ಲಿ ದೇಶಕ್ಕಾಗಿ ಪಕ್ಷ ಏನು ಮಾಡಿದೆ ಎಂಬ ಪ್ರಶ್ನೆಯನ್ನು ರಾಹುಲ್ ಮುಂದಿಟ್ಟಿದ್ದೇವೆ. ರಾಹುಲ್ ಈಗ ಕಾಂಗ್ರೆಸ್ ಅಧ್ಯಕ್ಷ ಆಗಿರುವುದರಿಂದ ಈ ಪ್ರಶ್ನೆಗೆ ಉತ್ತರಿಸುವುದು ಅವರ ಹೊಣೆ’ ಎಂದು ಶಾ ಹೇಳಿದರು.
ಮಧ್ಯಮ ವರ್ಗದ ಜನರು ಬಿಜೆಪಿಯಿಂದ ದೂರ ಸರಿಯುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಾ, ಸಮಾಜ ಬಿಜೆಪಿಯಿಂದ ದೂರ ಸಾಗುತ್ತಿದ್ದಾರೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ ಎಂದರು. ಮಧ್ಯಮ ವರ್ಗದ ಬೆಂಬಲದಿಂದಲೇ 14 ರಾಜ್ಯಗಳಲ್ಲಿ ಬಿಜೆಪಿ ಚುನಾವಣೆ ಗೆದ್ದಿದೆ ಎಂದು ಹೇಳಿದರು.
ಛತ್ತೀಸಗಡ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಗೆದ್ದು ಸತತ ನಾಲ್ಕನೇ ಅವಧಿಗೆ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಶಾ ವಿಶ್ವಾಸ ವ್ಯಕ್ತ ಪಡಿಸಿದರು.
**
ಸಿಂಗ್ಗೆ ಟೀಕೆ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೂ ಶಾ ಟೀಕಿಸಿದ್ದಾರೆ. ಪ್ರಧಾನಿಯಾಗಿದ್ದಾಗ ಸಿಂಗ್ ಅವರು ವಿದೇಶ ಪ್ರವಾಸ ಹೋಗುತ್ತಿ ದ್ದುದು ಯಾರಿಗೂ ಗೊತ್ತೇ ಆಗುತ್ತಿರ ಲಿಲ್ಲ. ಆದರೆ, ನರೇಂದ್ರ ಮೋದಿ ಅವರು ವಿದೇಶಕ್ಕೆ ಹೋದಾಗ ಅವರನ್ನು ಅಲ್ಲಿನ ಜನರು ಮತ್ತು ಅಲ್ಲಿರುವ ಭಾರತೀಯರು
‘ಸ್ವಾಗತಿಸುತ್ತಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.