ADVERTISEMENT

ಕಾನೂನು ಸಲಹೆಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಜನಲೋಕಪಾಲ ಜಂಟಿ ಕರಡು ರಚನಾ ಸಮಿತಿ ಸಭಾ ನಡಾವಳಿ ಧ್ವನಿ ಮುದ್ರಿಕೆಯನ್ನು ಸಾರ್ವಜನಿಕ ಮುಕ್ತಗೊಳಿಸುವ ಬಗ್ಗೆ  ಕೇಂದ್ರ ಸರ್ಕಾರ ಕಾನೂನು ಸಚಿವಾಲಯದ ಸಲಹೆ ಕೇಳಿದೆ.
 
ಜನ ಲೋಕಪಾಲ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಏಪ್ರಿಲ್‌ನಲ್ಲಿ ಕೈಗೊಂಡ ಉಪವಾಸ ಸತ್ಯಾಗ್ರಹಕ್ಕೆ ಮಣಿದ ಕೇಂದ್ರ, ಐವರು ಸಚಿವರು ಮತ್ತು ಐವರು ನಾಗರಿಕ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕರಡು ರಚನಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ನಡೆಸಿದ ಪ್ರತಿಯೊಂದು ಸಭೆಯ ನಡಾವಳಿಯನ್ನು ಧ್ವನಿ ಮುದ್ರಿಕೆ ಮಾಡಲಾಗಿದೆ.

`ಕರಡು ರಚನಾ ಸಮಿತಿ ನಡಾವಳಿಯ ಧ್ವನಿ ಮುದ್ರಿಕೆಯನ್ನು ಸಾರ್ವಜನಿಕ ಮುಕ್ತಗೊಳಿಸಿದರೆ ಆರ್‌ಟಿಐ ವ್ಯಾಪ್ತಿಯಲ್ಲಿ ಅರ್ಜಿ ಬಂದ ಪಕ್ಷದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಸರ್ಕಾರ ಕಾನೂನು ಸಚಿವಾಲಯವನ್ನು ಕೋರಿದೆ~ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಮಾಹಿತಿ ಹಕ್ಕು ವಿಭಾಗ ಹೇಳಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಎಸ್.ಸಿ. ಅಗರ್‌ವಾಲ್ ಜನ ಲೋಕಪಾಲ ಕರಡು ರಚನಾ ಸಮಿತಿ ನಡಾವಳಿಯ ಧ್ವನಿ ಮುದ್ರಿಕೆಯನ್ನು ಸಿ.ಡಿ ರೂಪದಲ್ಲಿ ನೀಡುವಂತೆ ಡಿಒಪಿಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಡಿಒಪಿಟಿ ತನ್ನ ವೆಬ್‌ಸೈಟ್‌ನಲ್ಲಿದ್ದ ಕರಡು ಸಮಿತಿ ನಡಾವಳಿಯ ಸಾರಾಂಶವನಷ್ಟೇ ಅರ್ಜಿದಾರರಿಗೆ ರವಾನಿಸಿ, ಧ್ವನಿ ಮುದ್ರಿಕೆ ತನ್ನ ಬಳಿ ಇಲ್ಲ ಎಂದು ಉತ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.