ADVERTISEMENT

ಕಾಲುವೆಗೆ ಶಾಲಾ ವ್ಯಾನ್, ಬಹುತೇಕ ಮಕ್ಕಳು ಪಾರು, ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 12:20 IST
Last Updated 26 ಸೆಪ್ಟೆಂಬರ್ 2011, 12:20 IST

ತಿರುವನಂತಪುರ (ಪಿಟಿಐ): ಮೂವತ್ತು ಮಂದಿ ಪ್ರಾಥಮಿಕ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವ್ಯಾನ್ ಕಾಲುವೆಗೆ ಉರುಳಿದ ಬೆನ್ನಲ್ಲೇ ಕೈಗೊಳ್ಳಲಾದ ರಕ್ಷಣಾ ಕಾರ್ಯಾಚರಣೆಯಲ್ಲಿ ಬಹುತೇಕ ಮಕ್ಕಳನ್ನು ರಕ್ಷಿಸಲಾಗಿದ್ದು, ಇಬ್ಬರು ಅಸು ನೀಗಿದ್ದಾರೆ. ಕನಿಷ್ಠ ಮೂವರು ಮಕ್ಕಳು ಕಣ್ಮರೆಯಾಗಿದ್ದಾರೆ.

ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಜಮಾಯಿಸಿದ ಸ್ಥಳೀಯ ಮಂದಿ ಬಹುತೇಕ ಮಕ್ಕಳನ್ನು ರಕ್ಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮೂವರ ಪೈಕಿ ಇಬ್ಬರು ಆಸ್ಪತ್ರೆಯಲ್ಲಿ ಮೃತರಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿಗೆ 25 ಕಿ.ಮೀ. ದೂರದ ಚನ್ನಕಂಕರದಲ್ಲಿ ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲೇ ಈ ದುರಂತ ಸಂಭವಿಸಿತು. ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದ ಖಾಸಗಿ ವ್ಯಾನ್ ಪಾರ್ವತಿ ಪುತನಾರ್ ನದಿಯ ಕಾಲುವೆಯ ಬಳಿ ಕಡಿದಾದ ಮಾರ್ಗದಲ್ಲಿ ಸಾಗುತ್ತಿದ್ದಾಗ ದುರಂತ ಘಟಿಸಿತು.

ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಈ ಮಕ್ಕಳು ನಗರ ಹೊರವಲಯದ ಕಳಕ್ಕೂಟ್ಟಂ ಜ್ಯೋತಿ ನಿಲಯಂನಲ್ಲಿ ಕಲಿಯುತ್ತಿರುವ ಮಕ್ಕಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.