ADVERTISEMENT

ಕಾಲ್ತುಳಿತ: 10 ಜನರ ಸಾವು

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST
ಕಾಲ್ತುಳಿತ: 10 ಜನರ ಸಾವು
ಕಾಲ್ತುಳಿತ: 10 ಜನರ ಸಾವು   

ರತ್ಲೆಂ, ಮಧ್ಯಪ್ರದೇಶ, (ಪಿಟಿಐ): ಜಾವೊರಾ ಪಟ್ಟಣದ ಬಳಿಯ ಹುಸೇನ್ ತೆಕ್ರಿಯಲ್ಲಿಯ ಮುಸ್ಲಿಂ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. 

ಮೊಹರಂ ನಂತರ ನಡೆಯುವ ಚೆಲ್ಲುಂ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಪಾರ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಹುಸೇನ್ ತೆಕ್ರಿಯ ಮುಖ್ಯ ದ್ವಾರದಲ್ಲಿ ಮಧ್ಯರಾತ್ರಿಯ ನಂತರ ಒಮ್ಮೆಲೆ ಜನದಟ್ಟಣೆ ಜಾಸ್ತಿಯಾದ್ದರಿಂದ ಪೊಲೀಸರು ಜನರನ್ನು ನಿಯಂತ್ರಿಸಲು ಯತ್ನಿಸಿದಾಗ ನೂಕುನುಗ್ಗಲು ಸಂಭವಿಸಿತು ಎನ್ನಲಾಗಿದೆ.

ಸಾವಿಗೀಡಾದವರಲ್ಲಿ ಆರು ಜನ ಮಹಿಳೆಯರಾದರೆ ನಾಲ್ವರು ಪುರುಷರು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ವ್ಯಾಸ್ ತಿಳಿಸಿದ್ದಾರೆ.

ನೂಕುನುಗ್ಗಲು ಸಂಭವಿಸಿದ ಜಾಗದಲ್ಲಿ ಹತ್ತು ಮೃತದೇಹಗಳು ಪತ್ತೆಯಾಗಿದ್ದು, ಇನ್ನೆರಡು ದೇಹಗಳು ಸ್ವಲ್ಪ ದೂರದಲ್ಲಿ ಪತ್ತೆಯಾಗಿವೆ. ಬಹುಶಃ ಈ ಇಬ್ಬರು ಚಳಿಗೆ ಸತ್ತಿರಬಹುದು ಎಂದು ಶಂಕಿಸಲಾಗಿದೆ.

ಮಾನಸಿಕ ಕಾಯಿಲೆ ವಾಸಿಯಾಗು ತ್ತದೆ ಎಂಬ ನಂಬಿಕೆಯಿಂದ ಹುಸೇನ್ ತೆಕ್ರಿಯ ಚೆಲ್ಲುಂ ಕಾರ್ಯಕ್ರಮದಲ್ಲಿ ಜನ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ರತ್ಲೆಂ  ಜಿಲ್ಲಾಧಿಕಾರಿ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಗಳಿಗೆ ತಲಾ 10 ಸಾವಿರ ಪರಿಹಾರ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಸಂತಾಪ: ಈ ದುರ್ಘಟನೆಯಲ್ಲಿ ಮಡಿದವರ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಸಂತಾಪ ವ್ಯಕ್ತಪ ಡಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅರಣ್ಯ ಸಚಿವ ಸರತಜ್ ಸಿಂಗ್ ಮತ್ತು ಗೃಹ ಸಚಿವ ಉಮಾ ಶಂಕರ್ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಕೊಡಿಸುವಂತೆಯೂ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.