ADVERTISEMENT

ಕಾವೇರಿ: ಶೀಘ್ರ ಅಧಿಸೂಚನೆಗೆ ಡಿಎಂಕೆ ಸಂಸದರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿಯನ್ನು ಭೇಟಿ ಮಾಡಿರುವ ತಮಿಳುನಾಡಿನ ಡಿಎಂಕೆ ಸಂಸದರು, ವಿವಾದ ಕುರಿತು `ಕಾವೇರಿ ನ್ಯಾಯಮಂಡಳಿ' ತೀರ್ಪಿನ ಕುರಿತು ಶೀಘ್ರ ಅಧಿಸೂಚನೆ ಹೊರಡಿಸಬೇಕು ಒತ್ತಾಯಿಸಿದ್ದಾರೆ.

ಪ್ರಧಾನಿಯವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ ಸಂಸತ್‌ನ ಎರಡೂ ಸದನಗಳ ಡಿಎಂಕೆ ಸದಸ್ಯರು, `ನೀರಿನ ಹಂಚಿಕೆ ಕುರಿತ ನಿರ್ಣಯ ತಡವಾದರೆ, ನೀರಿನ ಮೇಲೆ ತಮಿಳುನಾಡು ಹೊಂದಿರುವ ಹಕ್ಕನ್ನು ಕಿತ್ತುಕೊಂಡಂತೆ. ಹಾಗಾಗಿ ಶೀಘ್ರ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು' ಎಂದು ಜಲ ಸಂಪನ್ಮೂಲ ಸಚಿವಾಲಯದ ಮೂಲಗಳು ತಿಳಿಸಿವೆ.

`ನೀರು ಹಂಚಿಕೆ ಸಂಬಂಧ ನ್ಯಾಯಮಂಡಳಿ ತೀರ್ಪಿನ ಅಧಿಸೂಚನೆ ಹೊರಡಿಸದೇ ಇರುವುದೆರಿಂದ ಕರ್ನಾಟಕ ತಮಿಳುನಾಡಿಗೆ ನೀರು ಬಿಡಲು ತಡ ಮಾಡುತ್ತಿದೆ' ಎಂದು ಡಿಎಂಕೆ ಸಂಸದ ಟಿ.ಕೆ.ಎಸ್. ಇಳಂಗೊವನ್ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಪ್ರಧಾನಿಯನ್ನು ಭೇಟಿ ಮಾಡಿದ್ದ ಕರ್ನಾಟಕ, ಸುಪ್ರೀಂಕೋರ್ಟ್‌ಗೆ ತಮಿಳುನಾಡು ಅರ್ಜಿ ಸಲ್ಲಿಸಿರುವುದಕ್ಕೆ ಪರವಾಗಿ ನಿರ್ಣಯ ನೀಡಬಾರದು ಎಂದು ಒತ್ತಾಯಿಸಿತ್ತು.

ರಾಜ್ಯಗಳ ನಡುವಿನ ನದಿ ನೀರು ಹಂಚಿಕೆ ವಿವಾದ ಸಂಬಂಧ ಆರು ವರ್ಷಗಳ ನಂತರ ಕಾವೇರಿ ನ್ಯಾಯಮಂಡಳಿ ನೀಡಿದ್ದ ಅಂತಿಮ ಐತೀರ್ಪನ್ನು ಈ ತಿಂಗಳ ಅಂತ್ಯದಲ್ಲಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ.

ವಿವಾದ ಸಂಬಂಧ 2007ರಲ್ಲಿ ಕಾವೇರಿ ನ್ಯಾಯಮಂಡಳಿ, ತಮಿಳುನಾಡಿಗೆ 419 ಟಿಎಂಸಿ (ಬೇಡಿಕೆ 562 ಟಿಎಂಸಿ), ಕರ್ನಾಟಕಕ್ಕೆ 270 ಟಿಎಂಸಿ (ಬೇಡಿಕೆ 465) ಉಳಿದಂತೆ ಕೇರಳಕ್ಕೆ 30 ಮತ್ತು ಪಾಂಡಿಚೇರಿಗೆ 7 ಟಿಎಂಸಿ ನೀರು ಹಾಗೂ ಪರಿಸರ ಸಂರಕ್ಷಣೆಗಾಗಿ 10 ಟಿಎಂಸಿ ನೀರನ್ನು ಮೀಸಲಿಟ್ಟು ಐತೀರ್ಪು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.