ADVERTISEMENT

ಕಾಶ್ಮೀರ ಕಣಿವೆಯಲ್ಲಿ ಹಿಮಪಾತದ ಕಚಗುಳಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 10:54 IST
Last Updated 22 ಡಿಸೆಂಬರ್ 2013, 10:54 IST

ಶ್ರೀನಗರ, ಜಮ್ಮು, ಶೀಮ್ಲಾ(ಪಿಟಿಐ, ಐಎಎನ್ಎಸ್): ಉತ್ತರ ಭಾರದಲ್ಲಿ ಚಳಿ ತನ್ನ ಅಲೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಕಾಶ್ಮೀರ ಕಣಿವೆಯಲ್ಲಿ ಭಾನುವಾರ ಪ್ರಸಕ್ತ ಸಾಲಿನ ಪ್ರಥಮ ಹಿಮಪಾತ ಉಂಟಾಗಿದ್ದು, ಅಲ್ಲಿನ ನಿವಾಸಿಗಳು, ಪ್ರವಾಸಿಗರು ಹರ್ಷ ಘೋಷಗಳೊಂದಿಗೆ ಹುರುಪಿನಿಂದಲೇ ಸ್ವಾಗತಿಸಿದ್ದಾರೆ.


ಪ್ರಸ್ತುತ ಚಳಿಗಾಲದ ಪ್ರಥಮ ಹಿಮಪಾತ ಶ್ರೀನಗರ, ಶೀಮ್ಲಾ ಸೇರಿದಂತೆ ಪ್ರಮುಖ ನಗರಗಳ ವ್ಯಾಪ್ತಿ ಉಂಟಾಗಿದೆ. ಲಡಾಖ್ ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚಿನ ಹಿಮ ಬಿದ್ದಿದೆ.

ಹಿಮಪಾತದಿಂದಾಗಿ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಮ ಆವರಿಸಿದ್ದು, ವಾಹನಗಳ ಸಂಚಾರ ಬಂದ್ ಆಗಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಭಾನುವಾರ ಪೂರ್ಣ ಹಿಮಪಾತ ಉಂಟಾಗಲಿದ್ದು, ಸಂಜೆ ಇದರ ಪ್ರಮಾಣ ಇನ್ನೂ ಹೆಚ್ಚಾಗುವ ಸಾದ್ಯತೆ ಇದೆ ಎಂದು ಎಂದು ಹವಾಮಾನ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.

ಕಳೆದ 20 ದಿನಗಳಿಂದ ಉಂಟಾಗಿರುವ ಹೆಚ್ಚಿನ ಶೀತ ವಾತಾವರಣದಿಂದ ಹಲವು ಜನ ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ. ಜ್ವರ ಮತ್ತು ನೆಗಡಿ ತೊಂದರೆ ಉಂಟಾಗುತ್ತಿವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್ ಟ್ರಾಫಿಕ್ ಜಾಮ್!: ಪ್ರಥಮ ಹಿಮಪಾತ ಉಂಟಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಶುಭಾಶಯ ಕೋರಿ ಹರಿದಾಡುತ್ತಿರುವ ಸಂದೇಶಗಳಿಂದ(ಎಸ್ಎಂಎಸ್) ಮೊಬೈಲ್ ಟ್ರಾಫಿಕ್ ಜಾಮ್! ಉಂಟಾಗಿದೆ ಎಂದು ಹೇಳಿದ್ದಾರೆ.

9 ಜನ ಸಾವು: ಜಮ್ಮು ವ್ಯಾಪ್ತಿಯ ಕಿಷ್ತ್ವಾರ್ ಜಿಲ್ಲೆಯಲ್ಲಿ ಹಿಮಪಾತ ಉಂಟಾಗಿದ್ದ ರಸ್ತೆಯಲ್ಲಿ ತಡರಾತ್ರಿ ಸಂಭವಿಸಿ ಅಪಘಾದಿಂದ ವಾಹನವೊಂದು ಕಮರಿಗೆ ಉರುಳಿ 9 ಜನ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸ್ಥಳೀಯ ಮಿಲಿಟರಿ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT