ನವದೆಹಲಿ: ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಜತೆ ಮಾತುಕತೆ ನಡೆಸುವ ಆಶಾಭಾವನೆಯನ್ನು ಪಾಕಿಸ್ತಾನ ಹೊಂದಿದೆ ಎಂದು ಭಾರತದಲ್ಲಿನ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಾಸಿತ್ ಹೇಳಿದ್ದಾರೆ.
‘ಕಾಶ್ಮೀರದ ವಿಷಯದಲ್ಲಿ ಭಾರತದ ಜತೆ ಮಾತುಕತೆಗೆ ಒಂದು ಹೆಜ್ಜೆ ಮುಂದಿಟ್ಟಿದ್ದೆವು. ಈ ಬಗ್ಗೆ ಭಾರತಕ್ಕೆ ಆಹ್ವಾನವನ್ನೂ ನೀಡಿದ್ದೆವು. ಆದರೆ ಅದು ಫಲ ನೀಡಲಿಲ್ಲ’ ಎಂದು ನವದೆಹಲಿಯಲ್ಲಿ ಶನಿವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ತಿಳಿಸಿದ್ದಾರೆ.
‘ಕಾಶ್ಮೀರಕ್ಕೆ ಸಂಬಂಧಿಸಿದ ಮಾತುಕತೆ ಅಗತ್ಯ ಎಂಬುದು ಪಾಕಿಸ್ತಾನದ ನಿಲುವು’ ಎಂದು ಅವರು ಹೇಳಿದ್ದಾರೆ. ಕಾಶ್ಮೀರ ವಿಷಯದ ಕುರಿತು ಮಾತುಕತೆಗೆ ಬರುವಂತೆ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಎ.ಎ. ಚೌಧರಿ ಅವರು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರಿಗೆ ಆಹ್ವಾನ ನೀಡಿದ್ದರು.
ಆದರೆ ಈ ಆಹ್ವಾನವನ್ನು ಭಾರತ ತಿರಸ್ಕರಿಸಿತ್ತು. ನೆರೆಯ ರಾಷ್ಟ್ರದ ಜತೆ ಫಲ ನೀಡುವಂತಹ ಮಾತುಕತೆಗೆ ಮಾತ್ರ ಸಿದ್ಧ ಎಂದು ಸ್ಪಷ್ಟಪಡಿಸಿತ್ತು.
ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಒಪ್ಪಿಸಬೇಕೆಂಬ ಭಾರತದ ಕೋರಿಕೆಗೆ ಪಾಕಿಸ್ತಾನದ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ ಬಾಸಿತ್, ‘ಅದು ತುಂಬಾ ಹಳೆಯ ವಿಷಯ’ ಎಂದು ಹೇಳಿ ನುಣುಚಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.