ಚಂಡೀಗಡ: ಮೂರು ರಾಜ್ಯಗಳಿಗೆ ಬೇಕಾಗಿದ್ದ ಕುಖ್ಯಾತ ಗ್ಯಾಂಗ್ಸ್ಟರ್ ಸಂಪತ್ ನೆಹ್ರಾನನ್ನು ಹರಿಯಾಣ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ನೆಹ್ರಾನ ವಿರುದ್ಧ ಹರಿಯಾಣ, ಪಂಜಾಬ್, ರಾಜಸ್ಥಾನ ಹಾಗೂ ಚಂಡೀಗಡದಲ್ಲಿ 12ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು. ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಈತನಿಗಾಗಿ ಶೋಧ ನಡೆಸುತ್ತಿದ್ದ ಹರಿಯಾಣ ಪೊಲೀಸರು ಇಲ್ಲಿನ ಕಿಶನ್ಗಡದಲ್ಲಿ ಬುಧವಾರ ರಾತ್ರಿ ಬಂಧಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಕೆ.ಅಗರ್ವಾಲ್, ಗುರುಗ್ರಾಮ ಎಸ್ಟಿಎಫ್ನ ಐಜಿಪಿ ಸೌರಭ್ಸಿಂಗ್, ಡಿಐಜಿ ಸತೀಶ್ ಬಾಲನ್ ನೇತೃತ್ವದಲ್ಲಿ ರಚಿಸಿದ್ದ ತಂಡವು ಆರೋಪಿಯನ್ನು ಬಂಧಿಸಿದೆ.
ಮೂಲತಃ ರಾಜಸ್ಥಾನ ಚುರು ಜಿಲ್ಲೆಯ ಕಲೌರಿ ಗ್ರಾಮದ ಸಂಪತ್ ವಿರುದ್ಧ ಕೊಲೆ, ಕೊಲೆಯತ್ನ, ಡಕಾಯಿತಿ, ಸುಪಾರಿಕೊಲೆ ನಡೆಸಿದ ಆರೋಪಗಳಿವೆ. ಲಾರೆನ್ಸ್ ಬಿಷ್ಣೋಯಿ ತಂಡದಲ್ಲಿ ಶಾರ್ಪ್ಶೂಟರ್ ಆಗಿಯೂ ಗುರುತಿಸಿಕೊಂಡಿದ್ದನು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.