ನವದೆಹಲಿ (ಪಿಟಿಐ): ಏಳು ವರ್ಷಗಳಿಂದ ಗಣಿಗಾರಿಕೆ ನಿಲ್ಲಿಸಿರುವ ಕುದುರೆಮುಖದಲ್ಲಿ ಇನ್ನು ಮುಂದೆ `ಪರಿಸರ ಪ್ರಿಯ' ಪ್ರವಾಸಿ ಚಟುವಟಿಕೆಗಳು ಗರಿಗೆದರಲಿವೆ...!
ಗಣಿಗಾರಿಕೆ ನಡೆಯುತ್ತಿದ್ದ ಕುದುರೆಮುಖ ಪ್ರದೇಶಗಳಲ್ಲೇ ಇಂಥ `ಪರಿಸರ ಪೂರಕ' ಚಟುವಟಿಕೆ ಕೈಗೊಳ್ಳಲು ಕುದುರೆಮುಖ ಕಬ್ಬಿಣ ಮತ್ತು ಉಕ್ಕು ಕಂಪೆನಿ (ಕೆಐಒಸಿಎಲ್) ಮುಂದಾಗಿದೆ.
ರೂ. 805 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಕುದುರೆಮುಖ ಪಟ್ಟಣವನ್ನು `ಪರಿಸರ ಪಟ್ಟಣ'ವನ್ನಾಗಿಸಲು ಕೆಒಐಸಿಎಲ್ ಹೆಜ್ಜೆ ಇಟ್ಟಿದೆ.
`ಗಣಿಗಾರಿಕೆ ಪ್ರದೇಶದಲ್ಲಿರುವ ಮೂಲಸೌಲಭ್ಯಗಳನ್ನೇ ಬಳಸಿಕೊಂಡು ಪರಿಸರ ಪ್ರವಾಸೋದ್ಯಮದಂತಹ ಹೊಸ ಉದ್ದಿಮೆ ಆರಂಭಿಸುವ ಪ್ರಸ್ತಾವನೆ ಸಿದ್ಧಪಡಿಸಿರುವುದಾಗಿ' ಕೆಐಒಸಿಎಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಲಯ್ ಚಟರ್ಜಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
`ಕುದುರೆ ಮುಖದಲ್ಲಿ ಅನುಷ್ಠಾನಗೊಳಿಸುವ ಪರಿಸರ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ವಿವರವಾದ ಯೋಜನಾ ವರದಿ ಸಿದ್ಧವಾಗಿದೆ. ಕರ್ನಾಟಕ ಸರ್ಕಾರದಿಂದ ಯೋಜನೆಗೆ ತಾತ್ವಿಕ ಅನುಮೋದನೆ ದೊರೆತಿದೆ' ಎಂದು ಚಟರ್ಜಿ ವಿವರಿಸಿದ್ದಾರೆ.
ಕುದುರೆಮುಖ ವ್ಯಾಪ್ತಿಯ 1622 ಎಕರೆ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ ಅನುಷ್ಠಾನಕ್ಕೆ ಚಿಂತನೆ ನಡೆಸಿದೆ. ಈ ಪ್ರದೇಶವನ್ನು 99 ವರ್ಷ ಗುತ್ತಿಗೆ ತೆಗೆದುಕೊಳ್ಳಲು ಅನುಮೋದನೆ ನೀಡುವಂತೆ ಕರ್ನಾಟಕ ಸರ್ಕಾರವನ್ನೂ ಕಂಪೆನಿ ಕೇಳಿದೆ. ಈ ಯೋಜನೆಯಿಂದ ಉದ್ಯೋಗ ಸೃಷ್ಟಿಯಾಗುವ ಜೊತೆಗೆ ಸರ್ಕಾರಕ್ಕೆ ಆದಾಯ ಲಭ್ಯವಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.