ನವದೆಹಲಿ (ಐಎಎನ್ಎಸ್): ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ ಕೇಜ್ರಿವಾಲ್ ಅವರು ತನ್ನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ 'ಅಪಾಯಕಾರಿ' ಎಂಬುದನ್ನು ಬಿಜೆಪಿ ಸೋಮವಾರ ತಳ್ಳಿ ಹಾಕಿದೆ. ಆದರೆ ವಾರಾಣಸಿಯಲ್ಲಿ ಬಲಾಬಲ ಪ್ರದರ್ಶನಕ್ಕೆ ತಾನು ಸಿದ್ಧ ಎಂದು ಎಎಪಿ ತೋಳೇರಿಸಿದೆ.
'ನಾವು ಕೇಜ್ರಿವಾಲ್ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇಡೀ ರಾಷ್ಟ್ರದಲ್ಲಿ ಮೋದಿ ಅಲೆ ಇದೆ' ಎಂದು ಭಾರತೀಯ ಜನತಾ ಪಕ್ಷದ ಮಾಧ್ಯಮ ಸಂಚಾಲಕ ಹರೀಶ್ ಖುರಾನಾ ಇಲ್ಲಿ ಐಎಎನ್ ಎಸ್ ಜೊತೆ ಮಾತನಾಡುತ್ತಾ ಹೇಳಿದರು.
'ಕೇಜ್ರಿವಾಲ್ ಅವರು ತಾನೊಬ್ಬ ಅರಾಜಕತಾವಾದಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅವರ 49 ದಿನಗಳ ಆಡಳಿತ (ದೆಹಲಿಯಲ್ಲಿ) ಒಂದು 'ಗಂಡಾಂತರ'ವಾಗಿತ್ತು ಮತ್ತು ಅವರು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ' ಎಂದು ಖುರಾನಾ ನುಡಿದರು.
'ಉತ್ತರ ಪ್ರದೇಶ ಬಿಟ್ಟು ಬಿಡಿ. ದೆಹಲಿಯಲ್ಲಿ ಕೂಡಾ ಒಂದೇ ಒಂದು ಸ್ಥಾನ ಗೆಲ್ಲಲೂ ಅವರಿಗೆ ಸಾಧ್ಯವಾಗುವುದಿಲ್ಲ' ಎಂದೂ ಬಿಜೆಪಿ ಮಾಧ್ಯಮ ಸಂಚಾಲಕ ವಾದಿಸಿದರು.
ತನ್ನ ಪಕ್ಷವು ತಮ್ಮನ್ನು ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕೆ ಇಳಿಸಲು ಬಯಸಿರುವುದಾಗಿ ಕೇಜ್ರಿವಾಲ್ ಅವರು ಬೆಂಗಳೂರಿನಲ್ಲಿ ಪ್ರಕಟಿಸಿದ ಒಂದು ದಿನದ ಬಳಿಕ ಬಿಜೆಪಿಯ ಈ ಪ್ರತಿಕ್ರಿಯೆ ಬಂದಿದೆ. ಹಿಂದೂಗಳ ಪವಿತ್ರ ನಗರದಲ್ಲಿ ಮಾರ್ಚ್ 23 ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ತಾವು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಕೇಜ್ರಿವಾಲ್ ಹೇಳಿದ್ದರು.
ಕೇಜ್ರಿವಾಲ್ ಅವರ ನಿರ್ಧಾರಕ್ಕೆ ಇನ್ನೂ ಒಂದು ವಾರ ಇದ್ದರೂ, ದೆಹಲಿಯಲ್ಲಿ ಕೇಜ್ರಿವಾಲ್ ಅವರು ಶೀಲಾ ದೀಕ್ಷಿತ್ ಅವರನ್ನು ಎದುರಿಸಿದ್ದಂತೆಯೇ ವಾರಾಣಸಿಯಲ್ಲಿ ಕೇಜ್ರಿವಾಲ್- ಮೋದಿ ಹೋರಾಟಕ್ಕೆ ಪಕ್ಷ ಈಗಾಗಲೇ ಸನ್ನದ್ಧವಾಗಿದೆ ಎಂದು ಹಿರಿಯ ಎಎಪಿ ನಾಯಕರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.