ADVERTISEMENT

ಕೇಜ್ರಿವಾಲ್, ಸಚಿವರಿಗೆ ದೆಹಲಿ ಪೊಲೀಸ್ ತಡೆ

ಕೇಜ್ರಿವಾಲ್ ಪ್ರತಿಭಟನೆಗೆ ಮೊದಲೇ ದೆಹಲಿ ಮೆಟ್ರೋ ನಿಲ್ದಾಣಗಳು ಬಂದ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2014, 7:18 IST
Last Updated 20 ಜನವರಿ 2014, 7:18 IST

ನವದೆಹಲಿ (ಪಿಟಿಐ): ಕೇಂದ್ರ ಗೃಹ ಸಚಿವಾಲಯದ ಎದುರು ಧರಣಿ ನಡೆಸಲು ಹೊರಟಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳನ್ನು ಪೊಲೀಸರು ರೈಲು ಭವನದ ಸಮೀಪ ತಡೆದಿದ್ದಾರೆ.

ಈ ಮದ್ಯೆ ರೈಲುಭವನದಲ್ಲಿ ಕೇಜ್ರಿವಾಲ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಸಂಘಟನೆಯೊಂದರ ಬೆಂಬಲಿಗರನ್ನೂ ಪೊಲೀಸರು ಬಂಧಿಸಿದ್ದಾರೆ.

ಐಎಎನ್ಎಸ್ ವರದಿ: ಆಮ್ ಆದ್ಮಿ ಪಕ್ಷವು (ಆಪ್) ಪ್ರತಿಭಟನಾ ಪ್ರದರ್ಶನಕ್ಕೆ ನೀಡಿರುವ ಕರೆಯ ಹಿನ್ನೆಲೆಯಲ್ಲಿ ರಾಜಧಾನಿಯ ನಾಲ್ಕು ಮೆಟ್ರೋ ನಿಲ್ದಾಣಗಳನ್ನು ಸೋಮವಾರ ನಾಲ್ಕು ಗಂಟೆಗಳ ಕಾಲ ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ನಿಷ್ಕ್ರಿಯತೆಯನ್ನು ಪ್ರತಿಭಟಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಈದಿನ ಕೇಂದ್ರ ಗೃಹ ಸಚಿವಾಲಯದ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಲು ತೀರ್ಮಾನಿಸಿದ್ದಾರೆ.

ಕೇಜ್ರಿವಾಲ್ ಮತ್ತು ಅವರ ಸಂಪುಟದ ಸಚಿವರು ದೆಹಲಿ ಸಚಿವಾಲಯದಲ್ಲಿ ಸಭೆ ಸೇರಿದ್ದು ಅಲ್ಲಿಂದಲೇ ಗೃಹ ಸಚಿವಾಲಯದ ಕಡೆಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಪೊಲೀಸ್ ಅಧಿಕಾರಿಗಳು ಭದ್ರತೆ ಪಡೆದುಕೊಳ್ಳುವಂತೆ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಮನವೊಲಿಸಲು ದೆಹಲಿ ಸಚಿವಾಲಯಕ್ಕೆ ಧಾವಿಸಿದ್ದಾರೆ.

ಬುಧವಾರ ರಾತ್ರಿ ಗೂಢಚರ್ಯೆ ಮಾದರಿ ದಾಳಿ ಕಾಲದಲ್ಲಿ ದೆಹಲಿಯ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರ ಜೊತೆಗೆ ಮತ್ತು ವರದಕ್ಷಿಣೆ ಪ್ರಕರಣದಲ್ಲಿ ಅಸಮರ್ಪಕ ಕ್ರಮದ ಬಗ್ಗೆ ಸಚಿವೆ ರಾಖೆ ಬಿರ್ಲಾ ಅವರು ನೀಡಿದ ದೂರಿನ ಸಂದರ್ಭದಲ್ಲಿ  ಪೊಲೀಸರು ಸಹಕರಿಸಲಿಲ್ಲ ಎಂದು ಆಮ್ ಆದ್ಮಿ ಪಕ್ಷವು ಆಪಾದಿಸಿದೆ.

ಕೇಂದ್ರ ಗೃಹ ಸಚಿವಾಲಯದ ಆಧೀನದಲ್ಲಿ ಇರುವ ದೆಹಲಿ ಪೊಲೀಸರು ಉತ್ತರ ಬ್ಲಾಕ್ ನಲ್ಲಿ ಕೇಂದ್ರ ಗೃಹ ಸಚಿವಾಲಯ ಕಚೇರಿ ಇರುವ ಉತ್ತರ ದೆಹಲಿ ಜಿಲ್ಲೆಯಲ್ಲಿ ಅಕ್ರಮ ಸಭೆಗಳನ್ನು ನಿಷೇಧಿಸಿ ಭಾನುವಾರವೇ ನಿಷೇಧಾಜ್ಞೆ ವಿಧಿಸಿದ್ದಾರೆ.

ಈ ಮಧ್ಯೆ ಆಪ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಟೇಲ್ ಚೌಕ, ಸೆಂಟ್ರಲ್ ಸೆಕ್ರೆಟೇರಿಯಟ್, ಉದ್ಯೋಗ ಭವನ ಮತ್ತು ರೇಸ್ ಕೋರ್ಸ್ ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಚ್ಚಲಾಗುವುದು ಎಂದು ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT