ADVERTISEMENT

ಕೇಜ್ರಿವಾಲ್ ಹೊಸ ಪಕ್ಷ ಉದಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ವ್ಯವಸ್ಥೆ ಬದಲಾಯಿಸುವ ಆಶಯದೊಂದಿಗೆ ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಮಂಗಳವಾರ ತಮ್ಮ ಹೊಸ ಪಕ್ಷಕ್ಕೆ ಚಾಲನೆ ನೀಡಿದ್ದಾರೆ.

ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳು ರಾರಾಜಿಸುತ್ತಿದ್ದ ವೇದಿಕೆಯಲ್ಲಿ ಮಾತನಾಡಿದ ಕೇಜ್ರಿವಾಲ್, `ನ. 26ರಂದು ಪಕ್ಷಕ್ಕೆ ನಾಮಕರಣ ಮಾಡಲಾಗುವುದು~ ಎಂದು ಪ್ರಕಟಿಸಿದರು.
`ಹಿಂದೆ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗಳನ್ನು ದೇಶಪ್ರೇಮಿಗಳು ಎಂದು ಭಾವಿಸಲಾಗುತ್ತಿತ್ತು. ಆದರೆ ಇಂದು ಅಧಿಕಾರ ದಾಹಕ್ಕಾಗಿ ಚುನಾವಣೆಗೆ ನಿಲ್ಲುತ್ತಾರೆ. ನಮ್ಮ ಪಕ್ಷವು ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಲಿದೆ~ ಎಂದರು.

`ನೇರ ಆಡಳಿತ ಎನ್ನುವುದು ವಿಚಿತ್ರ ಪರಿಕಲ್ಪನೆ ಎಂದು ಅನೇಕರು ಹೇಳುತ್ತಾರೆ. ಆದರೆ ಇದು ಖಂಡಿತವಾಗಿಯೂ ಸಾಧ್ಯವಾಗುತ್ತದೆ ಎನ್ನುವ ಆತ್ಮವಿಶ್ವಾಸ ನನಗಿದೆ. ಇದಕ್ಕಾಗಿ ನಾವು ಸ್ಪಷ್ಟ ಮಾದರಿ ರೂಪಿಸುತ್ತಿದ್ದೇವೆ.

ಅಧಿಕಾರಕ್ಕೆ ಬಂದರೆ ಇದನ್ನು ಜಾರಿಗೆ ತರುತ್ತೇವೆ” ಎಂದು ಹೇಳುತ್ತ ಪಕ್ಷದ ಧ್ಯೇಯೋದ್ದೇಶಗಳನ್ನು ಒಳಗೊಂಡ ಕರಡು ಪತ್ರ ಬಿಡುಗಡೆ ಮಾಡಿದರು.

`ಅಣ್ಣಾ ಹಜಾರೆ ಅವರು ನಿಮ್ಮ ಪಕ್ಷವನ್ನು ಬೆಂಬಲಿಸುವರೇ~ ಎಂದು ಸುದ್ದಿಗಾರರು ಪ್ರಶ್ನೆಗೆ, `ಇದು ನಮಗೆ ಪರೀಕ್ಷೆ. ನಾವು ಉತ್ತಮ ಅಭ್ಯರ್ಥಿಗಳನ್ನು ನಿಲ್ಲಿದರೆ ಅಣ್ಣಾ ಬೆಂಬಲಿಸುತ್ತಾರೆ~ ಎಂದರು. ಬಿಜೆಪಿ ಸ್ವಾಗತ: ಕೇಜ್ರಿವಾಲ್ ಅವರು ನೂತನ ಪಕ್ಷ ಕಟ್ಟುತ್ತಿರುವುದನ್ನು ಬಿಜೆಪಿ ಸ್ವಾಗತಿಸಿದೆ. `ಪ್ರತಿಯೊಬ್ಬ ಭಾರತೀಯನಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇದೆ~ ಎಂದು ಪಕ್ಷದ ಮುಖಂಡ ಶಹನವಾಜ್ ಹುಸೇನ್ ಹೇಳಿದ್ದಾರೆ.

ಹಿಂಬಾಲಕರು ಎಷ್ಟು?: `ಕ್ಷಣಮಾತ್ರದಲ್ಲಿ ಪಕ್ಷ ಕಟ್ಟಬಹುದು. ಆದರೆ ಎಷ್ಟು ಮಂದಿ ನಿಮ್ಮನ್ನು ಅನುಸರಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ~ ಎಂದು  ರಾಮ್‌ದೇವ್ ಪ್ರತಿಕ್ರಿಯಿಸಿದ್ದಾರೆ.

`ಇಂದಿನಿಂದ  ಭ್ರಷ್ಟ ನಾಯಕರ ಕಾಲ ಮುಗಿಯಿತು. ಎಲ್ಲ ಪಕ್ಷಗಳು ಜನರಿಗೆ ಮೋಸ ಮಾಡಿವೆ. ನಾವು ಇನ್ನು ಮುಂದೆ ಅಂಗಲಾಚುವುದಿಲ್ಲ. ರಾಜಕೀಯ ಸಮರಕ್ಕೆ ಸಿದ್ಧರಾಗಿದ್ದೇವೆ
 -ಅರವಿಂದ ಕೇಜ್ರಿವಾಲ್
 

ಟೋಪಿಯ ಶೀರ್ಷಿಕೆ ಬದಲು
ಈ ಹಿಂದೆ ಅಣ್ಣಾ ತಂಡದ ಚಳವಳಿಯ ಕಾವು ಮುಗಿಲು ಮುಟ್ಟಿದ್ದ ಸಂದರ್ಭದಲ್ಲಿ ಪ್ರತಿಭಟನಾಕಾರರ ತಲೆ ಮೇಲೆ `ನಾನು ಅಣ್ಣಾ~ ಎಂಬ ಒಕ್ಕಣೆ ಹೊತ್ತ ಟೋಪಿಗಳು ರಾರಾಜಿಸುತ್ತಿದ್ದವು.  ಈಗ ಅಣ್ಣಾ ಹಾಗೂ ಕೇಜ್ರಿವಾಲ್ ಹಾದಿಗಳು ಬೇರೆಯಾಗಿವೆ.  ಇದಕ್ಕೆ ಸಾಕ್ಷಿ ಎಂಬಂತೆ ಬೆಂಬಲಿಗರು `ನಾನು ಜನ ಸಾಮಾನ್ಯ, ನನಗೆ ಲೋಕಪಾಲ ಬೇಕು~ ಎಂಬ ಶೀರ್ಷಿಕೆ ಹೊತ್ತ ಟೋಪಿಗಳನ್ನು ಧರಿಸಿದ್ದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.