ಡೆಹ್ರಾಡೂನ್: ಉತ್ತರಖಂಡದ ಯಾತ್ರಾ ಸ್ಥಳಗಳಾದ ಕೇದರನಾಥ, ಬದರೀನಾಥ ಸಂಪೂರ್ಣ ಹಿಮಾವೃತವಾಗಿದ್ದು, ಮಹಿಳಾ ಯಾತ್ರಾರ್ಥಿಯೊಬ್ಬರು ಮೃತಪಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಹಾಗೂ ರಾಜ್ಯಸಭಾ ಸದಸ್ಯ ಪ್ರದೀಪ್ ತಮ್ತಾ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಈ ಹಿಮಾವೃತ ಪ್ರದೇಶದಲ್ಲಿ ಸಿಲುಕಿದ್ದಾರೆ.
ಮಹಿಳಾ ಯಾತ್ರಾರ್ಥಿಯೊಬ್ಬರು ಕೇದರನಾಥದಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಅವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಸ್ಥಳೀಯ ಶಾಸಕ ಮನೋಜ್ ರಾವತ್, ಮಾಜಿ ಎಂಎಲ್ಸಿ ಪೃಥ್ವಿ ಪಾಲ್ ಸಿಂಗ್ ಸೇರಿದಂತೆ ಕೆಲವು ಕಾಂಗ್ರೆಸ್ಮು ಮುಖಂಡರು ಇಲ್ಲಿ ಸಿಲುಕಿಕೊಂಡಿದ್ದಾರೆ. ಇವರೆಲ್ಲರೂ ಭಾನುವಾರ ಗೌರಿಕುಂಡದಿಂಡ ಕೇದರಾನಾಥಕ್ಕೆ ಕಾಲ್ನಡಿಗೆ ಆರಂಭಿಸಿದ್ದರು.
ಹಿಮಪಾತದಲ್ಲಿ ಸಿಲುಕಿದ ಯಾತ್ರಾರ್ಥಿಗಳ ರಕ್ಷಣೆಗಾಗಿ ರಾಜ್ಯ ವಿಪತ್ತು ರಕ್ಷಣಾ ಪಡೆ , ಸ್ಥಳೀಯ ಪೊಲೀಸರು ಹಾಗೂ ಆಡಳಿತಗಾರರು ಮುಂದಾಗಿದ್ದು, ಗೌರಿಕುಂಡ ತಲುಪಿದ್ದಾರೆ. ವಾತಾವರಣ ಯಥಾಸ್ಥಿತಿಗೆ ಬರುವವರೆಗೂ ಯಾತ್ರಾರ್ಥಿಗಳನ್ನು ಬೇರೆ ಸ್ಥಳಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ರುದ್ರಪ್ರಯಾಗದ ಮ್ಯಾಜಿಸ್ಟ್ರೇಟ್ ಮಂಗೇಶ್ ಗಿಲ್ದಿಯಾಲ್ ಹೇಳಿದ್ದಾರೆ.
ಕೇದರನಾಥದಲ್ಲಿ ನೆಲಮಟ್ಟದಿಂದ 5 ಇಂಚು ಹಿಮ ಸಂಗ್ರಹವಾಗಿದ್ದು, ಯಾತ್ರಾರ್ಥಿಗಳ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಉತ್ತರಾಖಂಡದ ಪರ್ವತ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.