ADVERTISEMENT

ಕೇದಾರನಾಥ ಪ್ರಾಧಿಕಾರ ರಚನೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಡೆಹ್ರಾಡೂನ್ (ಪಿಟಿಐ):  ವೈಷ್ಣೋದೇವಿ ಯಾತ್ರೆ ಮಾದರಿಯಲ್ಲಿಯೇ ಹಿಮಾಲಯದ ಪ್ರಸಿದ್ಧ ಯಾತ್ರಾಸ್ಥಳ ಕೇದಾರನಾಥಕ್ಕೆ ಪ್ರತಿ ವರ್ಷ ಭೇಟಿ ನೀಡುವ ಯಾತ್ರಾರ್ಥಿಗಳ ನಿಯಂತ್ರಣಕ್ಕೆ `ಕೇದಾರನಾಥ ಅಭಿವೃದ್ಧಿ ಪ್ರಾಧಿಕಾರ' ರಚಿಸಲು ಉತ್ತರಾಖಂಡ ಸರ್ಕಾರ ತೀರ್ಮಾನಿಸಿದೆ.

ಕೇದಾರನಾಥದಲ್ಲಿ ಜೂನ್‌ನಲ್ಲಿ ಸಂಭವಿಸಿದ ಮೇಘಸ್ಫೋಟ, ಪ್ರವಾಹ ಮತ್ತು ಭೂಕುಸಿತದಲ್ಲಿ ಸಾವಿರಾರು ಯಾತ್ರಾರ್ಥಿಗಳು ಮೃತಪಟ್ಟ ನಂತರ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.

ಹಾನಿಗೊಳಗಾಗಿರುವ ಕೇದಾರನಾಥ ಕಣಿವೆಯ ಪುನರ್‌ನಿರ್ಮಾಣದ ಜತೆಗೆ ಯಾತ್ರಾರ್ಥಿಗಳ ನಿಯಂತ್ರಣಕ್ಕೆ ಪ್ರಾಧಿಕಾರ ರಚಿಸುವ ಪ್ರಯತ್ನ ಕೊನೆಹಂತದಲ್ಲಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಪ್ರಾಧಿಕಾರ ರಚನೆಯ ಅಧಿಸೂಚನೆ ಯಾವುದೇ ಸಂದರ್ಭದಲ್ಲಿ ಸರ್ಕಾರ ಹೊರಡಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಜೂನ್‌ನಲ್ಲಿ ಸುರಿದ ಮಹಾಮಳೆಯಿಂದಾಗಿ ಕೇದಾರನಾಥದಲ್ಲಿ ಭಾರಿ ಹಾನಿಯಾಗಿದೆ. ಅಲ್ಲದೆ ಕಣಿವೆ ಪ್ರದೇಶದಲ್ಲಿ ಸಾವಿರಾರು ಜನ ಮೃತಪಟ್ಟು, ಸಹಸ್ರಾರು ಯಾತ್ರಾರ್ಥಿಗಳು ಕಣ್ಮರೆಯಾಗಿದ್ದಾರೆ. ಇದರಿಂದಾಗಿಯೇ ಯಾತ್ರಿಗಳ ನಿಯಂತ್ರಣಕ್ಕೆ ಪ್ರಾಧಿಕಾರ ರಚಸುವ ತೀರ್ಮಾನಕ್ಕೆ ಬಂದಿದೆ ಎಂದರು.

ಪ್ರಾಧಿಕಾರ ಮೂಲಕ ದೇವಾಲಯಕ್ಕೆ ಭೇಟಿ ನೀಡುವವರ ನಿಯಂತ್ರಣ, ಯಾತ್ರಿಗಳ ಚಲನವಲನ ಹಾಗೂ ಯಾವ ಅವಧಿಯಲ್ಲಿ ಯಾತ್ರೆ ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.