ತಿರುವನಂತಪುರಂ (ಪಿಟಿಐ): ಏಪ್ರಿಲ್ 13ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಮಿತ್ರಪಕ್ಷಗಳು ಹೆಚ್ಚಿನ ಸೀಟಿಗೆ ಬೇಡಿಕೆ ಇಟ್ಟಿದ್ದು, ಸೀಟು ಹಂಚಿಕೆ ವಿಷಯ ಪ್ರಮುಖ ವಿರೋಧಪಕ್ಷವಾದ ಯುಡಿಎಫ್ಗೆ ಕಗ್ಗಂಟಾಗಿ ಪರಿಣಮಿಸಿದೆ.
ಸೀಟು ಹಂಚಿಕೆ ಕುರಿತು ಯುಡಿಎಫ್ ಪ್ರಮುಖ ಮಿತ್ರಪಕ್ಷ ಕಾಂಗ್ರೆಸ್ ಮತ್ತು ಐಯುಎಂಎಲ್, ಜೆಎಸ್ಎಸ್ ಮತ್ತು ಕೇರಳ ಕಾಂಗ್ರೆಸ್ (ಕೆಸಿ-ಎಂ)ಗಳೊಂದಿಗೆ ನಡೆಸಿದ ಮೊದಲ ಸುತ್ತಿನ ಮಾತುಕತೆ ಅಧಿಕ ಸೀಟುಗಳ ಬೇಡಿಕೆಯಿಂದಾಗಿ ಫಲಪ್ರದವಾಗಿಲ್ಲ.
140 ಸೀಟುಗಳಿರುವ ವಿಧಾನಸಭಾ ಚುನಾವಣೆಗೆ ಕಳೆದ ಬಾರಿ ಐಯುಎಂಎಲ್ 22 ಸೀಟುಗಳನ್ನು ಪಡೆದಿತ್ತು. ಆದರೆ ಈ ಬಾರಿ ಅದು ತನ್ನ ಪ್ರಾಬಲ್ಯ ಹೆಚ್ಚಿರುವ ಮಲಪ್ಪುರಂ ಜಿಲ್ಲೆಯಲ್ಲಿ ಮೂರು ಹೆಚ್ಚಿನ ಸೀಟುಗಳಿಗೆ ಬೇಡಿಕೆ ಇಟ್ಟಿದೆ. ಆದರೆ ಕಳೆದ ಸಲ 90 ಸೀಟುಗಳನ್ನು ಹಂಚಿಕೊಂಡಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸೀಟುಗಳ ಹಂಚಿಕೆಯಲ್ಲಿ ಯಾವುದೇ ಬದಲಾವಣೆಗೆ ಸಮ್ಮತಿ ನೀಡಿಲ್ಲ.
ಯುಡಿಎಫ್ನ ಇನ್ನೊಂದು ಮಿತ್ರಪಕ್ಷ ಕೆ.ಎಂ ಮಣಿ ನೇತೃತ್ವದ ಕೆಸಿ-ಎಂ ನೊಂದಿಗೆ ರಾಜಿ ಒಪ್ಪಂದ ಮಾಡಿಕೊಳ್ಳಲು ಕಾಂಗ್ರೆಸ್ ಹಿಂದೇಟು ಹಾಕಿದೆ. ಕಳೆದ ಬಾರಿ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕೆಸಿ-ಎಂ 24 ಸೀಟುಗಳನ್ನು ನೀಡುವಂತೆ ಒತ್ತಾಯಿಸಿದೆ.
ಎಲ್ಡಿಎಫ್ ಸರ್ಕಾರದಲ್ಲಿ ಮಂತ್ರಿಯಾಗಿ ನಂತರ ಕೆಸಿ-ಎಂನೊಂದಿಗೆ ಸೇರಿಕೊಂಡ ಕೇರಳ ಕಾಂಗ್ರೆಸ್ ಪಕ್ಷದ ನಾಯಕ ಜೋಸೆಫ್ ಅವರನ್ನು ತೊಡುಪುಜಾ ಕ್ಷೇತ್ರದ ಅಭ್ಯರ್ಥಿಯಾಗಿ ಮಣಿ ಅವರನ್ನು ಘೋಷಿಸಿರುವುದು ಸ್ಥಳೀಯ ಕಾಂಗ್ರೆಸ್ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಬಾರಿ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಎಸ್ಎಸ್ ನಾಲ್ಕು ಸೀಟುಗಳನ್ನು ಮಾತ್ರ ಪಡೆದುಕೊಳ್ಳಲು ಒಪ್ಪಿಕೊಂಡಿದೆ. ಹೊಸದಾಗಿ ಸೇರ್ಪಡೆಯಾಗಿರುವ ಎಂ.ಪಿ.ವೀರೇಂದ್ರಕುಮಾರ್ ನೇತೃತ್ವದ ಸಮಾಜವಾದಿ ಜನತಾ (ಪ್ರಜಾಪ್ರಭುತ್ವ) ಪಕ್ಷಕ್ಕೆ ಪ್ರತ್ಯೇಕವಾಗಿ ಅಥವಾ ಪಕ್ಷದಿಂದಲೇ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.