ADVERTISEMENT

`ಕ್ಷಣಕಾಲ ಆಧ್ಯಾತ್ಮಿಕ ಚಿಂತಕಿಯಾದೆ'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 17:52 IST
Last Updated 3 ಏಪ್ರಿಲ್ 2013, 17:52 IST
ಸುನಿತಾ
ಸುನಿತಾ   

ಕೋಲ್ಕತ್ತ (ಪಿಟಿಐ): ಉತ್ತರ ಧ್ರುವದಲ್ಲಿ ಕಂಗೊಳಿಸುವ ವೈಭವದ `ಬೆಳಕಿನ ಚಿತ್ತಾರ'ಗಳನ್ನು ಬಾನಂಗಳದಿಂದ ಕಂಡ ಭಾರತೀಯ ಸಂಜಾತೆ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ ಅವರನ್ನು ಅದು ಆಧ್ಯಾತ್ಮಿಕ ಚಿಂತಕರಾಗಿ ಬದಲಾಯಿಸಿತಂತೆ..!

ಭಾರತದ ಪ್ರವಾಸದಲ್ಲಿರುವ ಸುನೀತಾ ಅವರು ಕೋಲ್ಕತ್ತದಲ್ಲಿ ನಡೆದ ಸಮಾರಂಭವೊಂದರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ 400 ಕಿ.ಮೀ ದೂರವಿರುವ ಭೂಪ್ರದೇಶದಲ್ಲಿ ನಡೆಯುವ ಕೌತುಕಗಳನ್ನು ವರ್ಣಿಸಿದ ರೀತಿ ಇದು.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಉಪಕರಣದ ದುರಸ್ತಿ ಸಮಯದಲ್ಲಿ ಭೂಮಿಯ ಮೇಲಿನ ಉತ್ತರ ಧ್ರುವದಲ್ಲಿ ಘಟಿಸುವ ಬೆಳಕಿನ ವರ್ಣರಂಜಿತ ಚಿತ್ತಾರವನ್ನು ಕಂಡು ಪುಳಕಿತಳಾತೆ. ಆ ಕ್ಷಣದಲ್ಲಿ `ಭೂಗ್ರಹದಲ್ಲಿ ಯಾವುದೋ ಒಂದು ದೊಡ್ಡ ಪ್ರಮಾಣದ ಶಕ್ತಿ ಅಡಗಿದೆ ಎಂದು ಅನ್ನಿಸಿತು' ಎಂದು ಸುನಿತಾ ವಿವರಿಸಿದರು.

`ಸೌರವ್ಯೆಹದ ಚಟುವಟಿಕೆಗಳು ಭೂಮಿಯ ಗುರುತ್ವಾಕರ್ಷಣೆಯ ಜೊತೆ ಪರಸ್ಪರ ನಂಟು ಬೆಳೆಸಿದಾಗ ಉತ್ತರ ಧ್ರುವದಲ್ಲಿ ಅರೋರಾ ಬೋರಿಯಾಲಿಸ್ ಎಂಬ ಬೆಳಕಿನ ಚಿತ್ತಾರ ಮೂಡುತ್ತದೆ. ಅಂಥ ಕೌತುಕದ ಮುಂದೆ ನಾವೆಲ್ಲ ತೀರಾ ಸಣ್ಣವರು ಎನ್ನಿಸಿತು' ಎಂದು ಸುನಿತಾ ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯ ಯಾವುದೋ ಪ್ರದೇಶದಲ್ಲಿ ಉದಯಿಸುತ್ತಿದ್ದಾಗ ಉತ್ತರ ಧ್ರುವದಲ್ಲಿ ಹಸಿರು ಅಥವಾ ಕೆಲವು ಸಾರಿ ಮಸುಕು ಕೆಂಪು ಬಣ್ಣದ `ಅರೋರಾ ಬೋರಿಯಾಲಿಸಿಸ್' ಎಂಬ ಬೆಳಕು ಪ್ರಜ್ವಲಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.