ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಅವರ ನಡುವಣ ವಾಕ್ಸಮರಕ್ಕೆ ಲೋಕಸಭೆ ಗುರುವಾರ ಸಾಕ್ಷಿಯಾಯಿತು.
ಬಜೆಟ್ ಅಧಿವೇಶನ ವ್ಯರ್ಥವಾಗಿದ್ದಕ್ಕೆ ಅನಂತಕುಮಾರ್ ಅವರು ಕಾಂಗ್ರೆಸ್ ನಾಯಕರನ್ನು ಹೊಣೆ ಮಾಡಲು ಮುಂದಾದಾಗ, ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಆಕ್ರೋಶಗೊಂಡಿದ್ದರು. ಇದೇ ವೇಳೆ ಖರ್ಗೆ ಅವರು ವಾಗ್ದಾಳಿಗೆ ಮುಂದಾದರು. ‘ಕಾಂಗ್ರೆಸ್ ನಾಯಕರು ಚರ್ಚೆಗೆ ಸಿದ್ಧರಿದ್ದರು. ಸದನದಲ್ಲಿ ಶಾಂತಿ ಕಾಪಾಡುವ ಹೊಣೆ ಸರ್ಕಾರದ್ದಾಗಿತ್ತು’ ಎಂದು ಖರ್ಗೆ ಹೇಳಿದರು.
ಅನಂತಕುಮಾರ್ ಅವರು ಉಲ್ಲೇಖಿಸಿದ ಕಾಂಗ್ರೆಸ್ ನಾಯಕರ ಹೆಸರನ್ನು ಕಡತದಿಂದ ತೆಗೆದುಹಾಕುವಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಆದೇಶಿಸಿದರು.
‘ಸದನದಲ್ಲಿ ಶಾಂತಿ ಇಲ್ಲದೆ ಇರುವುದರಿಂದ ಅವಿಶ್ವಾಸ ಗೊತ್ತುವಳಿ ಕುರಿತು ಚರ್ಚಿಸಲು ಸಾಧ್ಯವಿಲ್ಲ’ ಎಂದು ಮಹಾಜನ್ ಅವರು ದಿನದ ಕಲಾಪವನ್ನು ಮುಂದೂಡಿದರು. ಇದರಿಂದಾಗಿ ಸತತವಾಗಿ 21ನೇ ದಿನವೂ ಕಲಾಪ ವ್ಯರ್ಥವಾಯಿತು. ಕಲಾಪ ಮುಂದೂಡಿದ ನಂತರವೂ ಕೆಲವು ನಿಮಿಷ ಖರ್ಗೆ ಹಾಗೂ ಅನಂತಕುಮಾರ್ ಅವರ ವಾಕ್ಸಮರ ಮುಂದುವರಿದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.