ADVERTISEMENT

ಗಂಭೀರ ಆರೋಪಗಳಿಂದ ಆಘಾತ, ಖಿನ್ನಳಾಗಿದ್ದೇನೆ: ಹನಿಪ್ರೀತ್‌ ಸಿಂಗ್‌

ಏಜೆನ್ಸೀಸ್
Published 3 ಅಕ್ಟೋಬರ್ 2017, 10:45 IST
Last Updated 3 ಅಕ್ಟೋಬರ್ 2017, 10:45 IST
ಹನಿಪ್ರೀತ್‌ ಸಿಂಗ್‌ (ಸಂಗ್ರಹ ಚಿತ್ರ)
ಹನಿಪ್ರೀತ್‌ ಸಿಂಗ್‌ (ಸಂಗ್ರಹ ಚಿತ್ರ)   

ಚಂಡಿಗಡ: ತಂದೆ ಹಾಗೂ ನನ್ನ ವಿರುದ್ಧ ಮಾಡಲಾಗಿರುವ ಗಂಭೀರ ಆರೋಪಗಳಿಂದ ಆಘಾತ ಹಾಗೂ ಖಿನ್ನತೆಗೊಳಗಾಗಿದ್ದೇನೆ ಎಂದು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ದತ್ತು ಮಗಳು ಹನಿಪ್ರೀತ್‌ ಸಿಂಗ್‌ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾಳೆ. ಇದರೊಂದಿಗೆ, ರಾಮ್‌ ರಹೀಮ್‌ ಬಂಧನದ ಬಳಿಕ ಇದೇ ಮೊದಲ ಬಾರಿಗೆ ಆಕೆ ಬಹಿರಂಗವಾಗಿ ಮಾತನಾಡಿದಂತಾಗಿದೆ.

‘ನನ್ನ ತಂದೆಯು ಮುಗ್ಧರಾಗಿದ್ದಾರೆ. ಎರಡು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಆಗಸ್ಟ್ 25ರಂದು ಅವರ ವಿರುದ್ಧ ತೀರ್ಪು ನೀಡಿರುವುದರಿಂದ ಖಿನ್ನಳಾಗಿದ್ದೇನೆ’ ಎಂದು ಆಕೆ ಹೇಳಿದ್ದಾಳೆ.

ರಾಮ್ ರಹೀಮ್ ಬಂಧನದ ನಂತರ ಪಂಚಕುಲಾದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ಕನಿಷ್ಠ 41 ಜನ ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿದ್ದರು. ಘಟನೆ ಹಿಂದೆ ಹನಿಪ್ರೀತ್ ಕೈವಾಡವೂ ಇದೆ ಎಂಬ ಆರೋಪ ದಾಖಲಾಗಿತ್ತು. ಆಕೆಯ ವಿರುದ್ಧ ದೆಹಲಿಯ ನ್ಯಾಯಾಲಯ ಬಂಧನದ ವಾರೆಂಟ್ ಅನ್ನೂ ಜಾರಿ ಮಾಡಿತ್ತು. ಆದರೆ, ಆಕೆ ತಲೆಮರೆಸಿಕೊಂಡಿದ್ದಳು. ಅಲ್ಲದೆ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು. ಆದರೆ, ನ್ಯಾಯಾಲಯ ಇದನ್ನು ತಿರಸ್ಕರಿಸಿತ್ತು.

ADVERTISEMENT

ಇದೀಗ ಸುದ್ದಿವಾಹಿನಿಗೆ ಹೇಳಿಕೆ ನೀಡಿರುವ ಆಕೆ, ಮುಂದಿನ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಕಾನೂನು ಸಲಹೆ ಪಡೆಯುವುದಾಗಿ ತಿಳಿಸಿದ್ದಾಳೆ. ಆಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸುದ್ದಿವಾಹಿನಿಗೆ ಹೇಳಿಕೆ ನೀಡುವಾಗ ಹನಿಪ್ರೀತ್ ಕಾರೊಂದರಲ್ಲಿದ್ದಳು ಎಂದು ಮೂಲಗಳು ತಿಳಿಸಿವೆ. ಆದರೆ, ಆಕೆ ಹೇಳಿಕೆ ನೀಡಿದ ಸ್ಥಳ ಯಾವುದು ಎಂಬುದನ್ನು ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.