ADVERTISEMENT

ಗಂಭೀರ ತನಿಖೆಗೆ ಒಪ್ಪಿಸಿದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ನಿವೃತ್ತ ಯೋಧರ ಪುನರ್ವಸತಿ ಯೋಜನೆಯಲ್ಲಿ ನಡೆದಿವೆ ಎನ್ನಲಾದ ಭಾರಿ ಹಗರಣಗಳನ್ನು `ಗಂಭೀರ ವಂಚನೆ ತನಿಖಾ ಕಚೇರಿ~ಗೆ (ಎಸ್‌ಎಫ್‌ಐಒ) ಒಪ್ಪಿಸಿ ಹೆಚ್ಚಿನ ತನಿಖೆ ನಡೆಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

ಯೋಜನೆಗಳಲ್ಲಿ ಅಕ್ರಮಗಳು ನಡೆದಿರುವುದನ್ನು ರಕ್ಷಣಾ ಸಚಿವಾಲಯದ ಆಂತರಿಕ ತನಿಖೆ ಪತ್ತೆಹಚ್ಚಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ಎ.ಕೆ.ಆಂಟನಿ ಈ ಪ್ರಕರಣಗಳನ್ನು ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯಡಿ ಬರುವ ಎಸ್‌ಎಫ್‌ಐಒಗೆ ಒಪ್ಪಿಸಿ ವಿಸ್ತೃತ ತನಿಖೆ ನಡೆಸಲು ಸೂಚಿಸಿದ್ದಾರೆ.

ರಕ್ಷಣಾ ಮಹಾನಿರ್ದೇಶನಾಲಯದ (ಪುನರ್ವಸತಿ) ಅಧಿಕಾರಿಗಳು ನಿಯಮ ಹಾಗೂ ಮಾರ್ಗದರ್ಶಿ ಸೂತ್ರಗಳನ್ನು ಗಾಳಿಗೆ ತೂರಿ, ಆಡಳಿತಾತ್ಮಕ ಲೋಪಗಳನ್ನು ಎಸಗಿರುವುದು ಆಂತರಿಕ ತನಿಖೆಯಿಂದ ದೃಢಪಟ್ಟಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ಸೀತಾಂಶು ಕರ್ ಹೇಳಿದ್ದಾರೆ.

ಎಕ್ಸ್- ಸರ್ವೀಸ್‌ಮೆನ್ ಏರ್‌ಲಿಂಕ್ ಟ್ರಾನ್ಸ್‌ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿದ ಪ್ರಕರಣವನ್ನು ಇದೀಗ ಎಸ್‌ಎಫ್‌ಐಒಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೆಕ್ಯುರಿಟಿ ಸಂಸ್ಥೆಗಳ ಮರುಗುತ್ತಿಗೆಯಲ್ಲಿ ಅಕ್ರಮ ನಡೆದಿದೆ. ಕೆಲವೇ ಯೋಧರು ಹಲವಾರು ಬಾರಿ ಸವಲತ್ತುಗಳನ್ನು ಬಳಸಿಕೊಂಡಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮಹಾನಿರ್ದೇಶನಾಲಯದ ಕಾರ್ಯದಲ್ಲಿ ಪಾರದರ್ಶಕತೆ ಖಾತ್ರಿಗೊಳಿಸುವ ಉದ್ದೇಶದಿಂದ ಆಂಟನಿ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಕರ್ ಸಮರ್ಥಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರದಡಿ ಬರುವ ಸರ್ಕಾರಿ ಸ್ವಾಮ್ಯದ ಕಂಪೆನಿಗಳಿಗೆ ನಿವೃತ್ತ ಯೋಧರು ನಡೆಸುವ ಸೆಕ್ಯುರಿಟಿ ಏಜೆನ್ಸಿಗಳ ಭದ್ರತಾ ಸೇವೆ ಒದಗಿಸುವುದು ಸೇರಿದಂತೆ ಹಲವು ಕಾರ್ಯಗಳು ಪುನರ್ವಸತಿ ಯೋಜನೆಯಲ್ಲಿ ಇದರಲ್ಲಿ ಸೇರಿವೆ. ಆಂತರಿಕ ತನಿಖೆ ನಡೆಸಿದ್ದ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿ ಕೆಲವು ದಿನಗಳ ಹಿಂದೆ ರಕ್ಷಣಾ ಸಚಿವರಿಗೆ ವರದಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.