ನವದೆಹಲಿ (ಐಎಎನ್ಎಸ್): ಭಾರತ ಮತ್ತು ಚೀನಾ ಮಂಗಳವಾರ ಇಲ್ಲಿ ಎರಡೂ ದೇಶಗಳ ನಡುವಣ ವಿವಾದಾತ್ಮಕ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಗಡಿ ನಿಯಂತ್ರಣ ಚೌಕಟ್ಟು ರಚಿಸುವ ಒಪ್ಪಂದಕ್ಕೆ ಸಹಿ ಹಾಕಿವೆ.
ಉಭಯ ರಾಷ್ಟ್ರಗಳ ವಿಶೇಷ ಪ್ರತಿನಿಧಿಗಳ ಮಧ್ಯೆ ನಡೆದ 15ನೇ ಸುತ್ತಿನ ಗಡಿ ಮಾತುಕತೆಯ ಕೊನೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಎರಡೂ ದೇಶಗಳ ಗಡಿಯಲ್ಲಿ ನಿಯಂತ್ರಣ ರೇಖೆಯುದ್ದಕ್ಕೂ ನುಸುಳುವಿಕೆಯ ಪ್ರಕರಣಗಳು ನಡೆದಲ್ಲಿ ಎರಡೂ ದೇಶಗಳ ವಿದೇಶಾಂಗ ಕಚೇರಿಗಳ ನಡುವೆ ಸಕಾಲಿಕ ಸಂಪರ್ಕ ಸೌಲಭ್ಯಗಳನ್ನು ಈ ಚೌಕಟ್ಟಿನಲ್ಲಿ ಒಳಪಡಿಸಲಾಗಿದೆ.
ಎರಡೂ ದೇಶಗಳ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡುವುದಕ್ಕೆ ಸಂಬಂಧಿಸಿದಂತೆ ಪ್ರಮುಖ ಗಡಿ ವ್ಯವಹಾರಗಳೊಂದಿಗೆ ವ್ಯವಹರಿಸಲು ಸಮಾಲೋಚನಾ ಮತ್ತು ಅನ್ಯೋನ್ಯ ಸಂಬಂಧ ಕಲ್ಪಿಸುವ ಕಾರ್ಯ ವ್ಯವಸ್ಥೆಯನ್ನು ಸ್ಥಾಪಿಸಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಸೋಮವಾರದಿಂದ ಆರಂಭವಾದ ಎರಡು ದಿನಗಳ ಗಡಿ ಮಾತುಕತೆಯಲ್ಲಿ ವಿಶೇಷ ಪ್ರತಿನಿಧಿಗಳಾಗಿ ಭಾಗವಹಿಸಿದ್ದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಮತ್ತು ಚೀನಾದ ಸ್ಟೇಟ್ ಕೌನ್ಸಿಲರ್ ದಾಯಿ ಬಿಂಗುವೊ ಈ ಒಪ್ಪಂದಕ್ಕೆ ಸಹಿ ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.