ನವದೆಹಲಿ (ಪಿಟಿಐ): ಕಪ್ಪುಹಣ ಮತ್ತು ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ತಮ್ಮ ಬೇಡಿಕೆಗಳನ್ನು ಗಡುವಿನೊಳಗೆ ಈಡೇರಿಸದೇ ಇದ್ದಲ್ಲಿ ರಾಷ್ಟ್ರಪತಿಗಳ ಬಾಗಿಲು ಬಡಿದು ಸರ್ಕಾರದ ಮೇಲೆ ಒತ್ತಡ ತರುವುದಾಗಿ ಯೋಗ ಗುರು ರಾಮದೇವ್ ಅವರು ತಮ್ಮ ನಿರಶನದ ಮೂರನೇ ದಿನವಾದ ಶನಿವಾರ ಎಚ್ಚರಿಕೆ ನೀಡಿದರು.
ಗುರುವಾರ ರಾಮಲೀಲಾ ಮೈದಾನದಲ್ಲಿ ಮೂರು ದಿನಗಳ ನಿರಶನ ಆರಂಭಿಸುವ ವೇಳೆಯಲ್ಲಿ ತಾವು ಪ್ರಸ್ತಾಪಿಸಿದ ವಿಷಯಗಳನ್ನು ಇತ್ಯರ್ಥ ಪಡಿಸಲು ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಿದ್ದರು.
~ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ನಿರ್ಧಾರಕ್ಕಾಗಿ ಈದಿನ ಸಂಜೆಯವರೆಗೆ ನಾವು ಕಾಯುತ್ತೇವೆ. ಸಂಜೆಯ ವೇಳೆಗೆ ನಾವು ನೀಡಿದ್ದ ಗಡುವು ಮುಗಿಯುತ್ತದೆ. ಈ ಅವಧಿ ಮುಗಿದ ಬಳಿಕ ಇದೇ ರಾಮಲೀಲಾ ಮೈದಾನದಿಂದ ಗರ್ಜನೆ ಮೊಳಗುತ್ತದೆ~ ಎಂದು ಯೋಗಗುರು ಹೇಳಿದರು.
~ಈವರೆಗೆ ನಾವು ಯಾರದ್ದೇ ಹೆಸರುಗಳನ್ನೂ ಹೇಳುತ್ತಿಲ್ಲ. ಆದರೆ ಗಡುವು ಮುಗಿದ ಬಳಿಕ ಈ ದೇಶದ ಸಂಪತ್ತು ಕೊಳ್ಳೆ ಹೊಡೆಯುವ ಕೆಲಸದಲ್ಲಿ ತಪ್ಪು ಎಸಗುತ್ತಿರುವವರ ಹೆಸರುಗಳನ್ನು ಹೇಳುತ್ತೇವೆ~ ಎಂದು ಈದಿನ ಬೆಳಗ್ಗೆ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ನುಡಿದರು.
ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ನಿಕಟವರ್ತಿಗಳ ಜೊತೆಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು ಸರ್ಕಾರದ ಮೇಲೆ ಒತ್ತಡ ತರಲು ಸಂಸತ್ ಸದಸ್ಯರು ಮತ್ತು ಗ್ರಾಮ ಸಭೆಗಳಿಂದ ಸಂಗ್ರಹಿಸಿದ ಬೆಂಬಲ ಪತ್ರಗಳನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
~ನಾವು 1,25 ಲಕ್ಷ ಗ್ರಾಮಸಭೆಗಳನ್ನು ಸಂಪರ್ಕಿಸಿದ್ದು ಅವುಗಳ ಬೆಂಬಲ ಪತ್ರ ಸಂಗ್ರಹಿಸಿದ್ದೇವೆ. 225 ಮಂದಿ ಸಂಸತ್ ಸದಸ್ಯರಿಂದಲೂ ಬೆಂಬಲ ಪತ್ರಗಳು ನಮಗೆ ತಲುಪಿವೆ. ಈ ಬೆಂಬಲ ಪತ್ರಗಳನ್ನು ನಾವು ರಾಷ್ಟಪತಿ ಬಳಿಗೆ ಒಯ್ಯುತ್ತೇವೆ. ಕೆಲಸ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಬೀರಲು ನಾವು ರಾಷ್ಟಪತಿಯವನ್ನು ಒತ್ತಾಯಿಸುತ್ತೇವೆ~ ಎಂದು ಅವರು ನುಡಿದರು.
~ಹಲವು ಮಂದಿ ಕಾಂಗ್ರೆಸ್ ಸಂಸತ್ ಸದಸ್ಯರ ಬೆಂಬಲವೂ ನಮಗಿದೆ. ಆದರೆ ಪಕ್ಷದಿಂದ ವಜಾ ಮಾಡಬಹುದೆಂಬ ಭೀತಿಯಿಂದ ಲಿಖಿತ ಬೆಂಬಲ ನೀಡಲು ಅವರು ಹಿಂಜರಿದಿದ್ದಾರೆ~ ಎಂದು ರಾಮದೇವ್ ಪ್ರತಿಪಾದಿಸಿದರು.
~ಕಪ್ಪು ಹಣವನ್ನು ಹಿಂದಕ್ಕೆ ತರುವುದು ಹಾಗೂ ಪ್ರಬಲ ಲೋಕಪಾಲ ಮಸೂದೆ ರಚನೆ ಕುರಿತು ಸರ್ಕಾರದಿಂದ ದೃಢ ಕ್ರಮದ ನಿರ್ಧಾರ ಹೊರಬೀಳುವವರೆಗೆ ನಾನು ರಾಮಲೀಲಾ ಮೈದಾನವನ್ನು ಬಿಡುವುದಿಲ್ಲ. ಸರ್ಕಾರ ಇಂತಹ ನಿರ್ಧಾರ ಕೈಗೊಂಡ ಬಳಿಕವೇ ರಾಮಲೀಲಾ ಮೈದಾನದಿಂದ ಹೊರಡುತ್ತೇನೆ~ ಎಂದು ರಾಮದೇವ್ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.