ನವದೆಹಲಿ (ಪಿಟಿಐ): ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಸಿಬಿಐ ಬಂಧನಕ್ಕೊಳ್ಳಗಾಗಿರುವ ಆಂಧ್ರಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮಿ ಅವರಿಗೆ ಸೋಮವಾರ ಸುಪ್ರೀಂ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಶ್ರೀಲಕ್ಷ್ಮಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್.ಎಲ್.ದತ್ತು ಹಾಗೂ ಸಿ.ಕೆ. ಪ್ರಸಾದ್ ಅವರನ್ನು ಒಳಗೊಂಡ ನ್ಯಾಯಪೀಠವು ಅವರಿಗೆ ಜಾಮೀನಿಗಾಗಿ ಹೈದರಾಬಾದ್ನ ವಿಶೇಷ ಸಿಬಿಐ ನ್ಯಾಯಾಯಲಕ್ಕೆ ಮೊರೆ ಹೋಗುವಂತೆ ಹೇಳಿದೆ.
ಸಿಬಿಐ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿರುವ ಈ ಹಂತದಲ್ಲಿ ತಾನು ಯಾವುದೇ ರೀತಿಯ ಪರಿಹಾರ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಸಿಬಿಐ ಅಧಿಕಾರಿಗಳು ಹೊಸದಾಗಿ ಜಾಮೀನು ಕೋರಿದರೆ ನ್ಯಾಯಾಲಯ ಪರಿಶೀಲಿಸುತ್ತದೆ ಎಂದು ನ್ಯಾಯಪೀಠವು ಹೇಳಿತು.
ನ್ಯಾಯಪೀಠದ ಮುಂದೆ ಹಾಜರಾದ ಶ್ರೀಲಕ್ಷ್ಮಿಯ ಪರ ವಕೀಲರಾದ ಎಲ್.ನಾಗೇಶ್ವರ ರಾವ್ ಅವರು ಶ್ರೀಲಕ್ಷ್ಮಿ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಯೊಂದಿಗೆ ಸಹಕರಿಸುತ್ತಾರೆ ಹಾಗೂ ಅವರಿಂದ ಸಾಕ್ಷಿದಾರರಿಗೆ ಯಾವುದೇ ರೀತಿಯ ಬೆದರಿಕೆ ಇಲ್ಲ ಆದ್ದರಿಂದ ಜಾಮೀನು ನೀಡಬೇಕು ಎಂದು ಮನವಿ ಮಾಡಿಕೊಂಡರು.
ಸಿಬಿಐ ಪರ ನ್ಯಾಯಾಯಲಕ್ಕೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿವೇಕ್ ತನ್ಕಾ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗೆ ಶ್ರೀಲಕ್ಷ್ಮಿ ಅವರ ಉಪಸ್ಥಿತಿಯು ಅಗತ್ಯವಾಗಿದ್ದು, ಅವರಿಗೆ ಜಾಮೀನು ನೀಡಬಾರದೆಂದು ವಾದಿಸಿದರು.
ಆಂಧ್ರಪ್ರದೇಶ ಹೈಕೋರ್ಟ್ ಪ್ರಕರಣದ ತನಿಖೆ ಇನ್ನೂ ವಿಚಾರಣೆಯ ಹಂತದಲ್ಲಿದ್ದು, ಜಾಮೀನು ಪಡೆದಿರುವ ಐಎಎಸ್ ಅಧಿಕಾರಿ ವಿಚಾರಣೆಯಲ್ಲಿ ತಮ್ಮ ಪ್ರಭಾವ ಬೀರಬಹುದು, ಇದಲ್ಲದೇ ಇತರೆ ಆಪಾದಿತರೂ ಇನ್ನೂ ಜೈಲಿನಲ್ಲಿದ್ದಾರೆ ಎಂಬ ತನಿಖಾ ಸಂಸ್ಥೆಯ ವಾದವನ್ನು ಎತ್ತಿ ಹಿಡಿದು ಸಿಬಿಐ ವಿಶೇಷ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ರದ್ದು ಪಡಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಶ್ರೀಲಕ್ಷ್ಮಿ ಅವರು ಸುಪ್ರೀಂ ಕೋರ್ಟ್ನಲ್ಲಿ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.