ಕೊಟ್ಟಾಯಂ(ಪಿಟಿಐ): ಗರ್ಭಿಣಿ ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಮಗುವಿನ ರಕ್ಷಣೆಗಾಗಿ ಪತಿ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಆಕೆಯನ್ನು ಹೆಗಲ ಮೇಲೆ ಕೂರಿಸಿಕೊಂಡು 40 ಕಿ.ಮೀ. ಕಾಡಿನಲ್ಲಿ ನಡೆದರೂ ಮಗುವನ್ನು ರಕ್ಷಿಸಿಕೊಳ್ಳಲಾಗದ ಘಟನೆಯೊಂದು ಇತ್ತೀಚೆಗೆ ನಡೆದಿದೆ.
ಇಲ್ಲಿನ ಅರಣ್ಯ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನ ರಸ್ತೆ ಹಾಗೂ ಆಸ್ಪತ್ರೆಯಂತಹ ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿಯುವ ಘಟನೆ ಇದಾಗಿದೆ.
ಬುಡಕಟ್ಟು ಯುವಕ ಅಯ್ಯಪ್ಪನ್, ಏಳು ತಿಂಗಳ ಗರ್ಭಿಣಿ ಪತ್ನಿ ಸುಧಾಳನ್ನು ಕೊನ್ನಿ ಪ್ರದೇಶದ ಕಾಡಿನಿಂದ ಆಸ್ಪತ್ರೆಗೆ ನಡೆದೇ ಕರೆತಂದರೂ ಆಕೆಯ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿತ್ತು. 40 ಕಿ.ಮೀ. ನಡೆದ ನಂತರ ಜೀಪ್ ಒಂದರಲ್ಲಿ ಪತನಂತಿಟ್ಟ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲು ಸಫಲವಾದ. ಆದರೆ ಅಲ್ಲಿನ ವೈದ್ಯರು ಕೊಟ್ಟಾಯಂನ ವೈದ್ಯಕೀಯ ಕಾಲೇಜಿಗೆ ಸೇರಿಸುವಂತೆ ಸಲಹೆ ನೀಡಿದರು.
`ಆಸ್ಪತ್ರೆಗೆ ಕರೆ ತರುವ ವೇಳೆಗಾಗಲೇ ಗರ್ಭಿಣಿಯ ದೇಹ ನೀರಿನಿಂದ ಊದಿಕೊಂಡಿತ್ತು. ಅಲ್ಲದೆ ಅವರಿಗೆ ಅತಿಯಾದ ರಕ್ತದೊತ್ತಡ ಹಾಗೂ ದೇಹ ನಡುಗುತ್ತಿತ್ತು. ಆದರಿಂದ ಹೊಟ್ಟೆಯಲ್ಲಿದ್ದ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ' ಎಂದು ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ಡಾ.ಕುಂಜಮ್ಮ ಹೇಳಿದರು.
ಅರಣ್ಯದಂಚಿನಲ್ಲಿ ವಾಸಿಸುವ ಈ ಬುಡಕಟ್ಟು ಜನ ಜೇನು ಹಾಗೂ ಕಾಡಿನಲ್ಲಿ ದೊರೆಯುವ ಇತರ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.