ADVERTISEMENT

ಗಲ್ಲು ಶಿಕ್ಷೆ ರದ್ದು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:00 IST
Last Updated 12 ಸೆಪ್ಟೆಂಬರ್ 2011, 19:00 IST

ಚಂಡಿಗಡ: ಪಾಕ್ ಪ್ರಜೆಯೊಬ್ಬನನ್ನು ಕೊಲೆ ಮಾಡಿ ಮರಣದಂಡನೆ ಎದುರಿಸುತ್ತಿದ್ದ 17 ಮಂದಿ ಭಾರತೀಯರ ಪರವಾಗಿ ಮೃತನ ಕುಟುಂಬಕ್ಕೆ ಪರಿಹಾರ ಹಣ ನೀಡಿದ ಹಿನ್ನೆಲೆಯಲ್ಲಿ ಅವರೆಲ್ಲರೂ ಶಿಕ್ಷೆಯಿಂದ ಬಚಾವಾಗಿದ್ದಾರೆ.

ಆದರೆ ಆರೋಪಿಗಳು 2 ವರ್ಷದ ಜೈಲು ಶಿಕ್ಷೆ ಅನುಭವಿಸಬೇಕಿದೆ. ಈಗಾಗಲೇ ಒಂದೂವರೆ ವರ್ಷಗಳನ್ನು ಜೈಲಿನಲ್ಲಿ ಕಳೆದಿರುವುದರಿಂದ ಕೋರ್ಟ್‌ಗೆ  ಅಗತ್ಯ ಇರುವ ದಾಖಲೆ ಪತ್ರಗಳನ್ನು ಒದಗಿಸಿದ ನಂತರ ಅವರೆಲ್ಲರೂ ಕೆಲವೇ ತಿಂಗಳುಗಳಲ್ಲಿ ಬಿಡುಗಡೆ ಆಗಲಿದ್ದಾರೆ.

20-27 ವಯೋಮಾನದ ಯುವಕರನ್ನು 2009ರ ಜನವರಿ ತಿಂಗಳಿನಲ್ಲಿ ಪಾಕಿಸ್ತಾನದ ಪ್ರಜೆ ಮುಶೀರ್ ಖಾನ್ ಎಂಬಾತನ ಕೊಲೆ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಲಯಲ್ಲಿ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಪಂಜಾಬ್‌ನ ಅನಿವಾಸಿ ಭಾರತೀಯರೊಬ್ಬರು ಮತ್ತು ದುಬೈನ ಹೋಟೆಲ್ ಉದ್ಯಮಿ ಎಸ್‌ಪಿಎಸ್ ಒಬೆರಾಯ್ ಅವರು ಮೃತನ ಕುಟುಂಬಕ್ಕೆ ಪರಿಹಾರ ಹಣ ನೀಡಲು ಮುಂದಾಗಿ ಎಂಟು ಕೋಟಿ ಪಾಕಿಸ್ತಾನ ರೂಪಾಯಿಗಳನ್ನು ನೀಡಿದ ನಂತರ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ರದ್ದು ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.