ಮುಂಬೈ (ಪಿಟಿಐ): ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ನಡೆಸಿದ್ದ ಉಪವಾಸಕ್ಕೂ ಈಗ ಅಣ್ಣಾ ಹಜಾರೆ ಅವರು ಉಪವಾಸವನ್ನು ಪ್ರತಿಭಟನೆಯ ಅಸ್ತ್ರವಾಗಿ ಬಳಸುತ್ತಿರುವುದಕ್ಕೂ ವ್ಯತ್ಯಾಸವಿದೆ ಎಂದು ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಗಾಂಧಿ ಉಪವಾಸಕ್ಕೆ ಎದುರಾಳಿಯನ್ನು ಮಿತ್ರನನ್ನಾಗಿ ಪರಿವರ್ತಿಸುವ ಉದ್ದೇಶವಿರುತ್ತಿತ್ತು. ಆದರೆ ಅಣ್ಣಾ ಒಬ್ಬ ಶತ್ರುವಿನ ವಿರುದ್ಧ ಉಪವಾಸ ಮಾಡುತ್ತಿದ್ದಾರೆ. ಅಣ್ಣಾ ರಾಷ್ಟ್ರವನ್ನು ಮುಸುಕಿರುವ ಹತಾಶೆಯ ಪ್ರತೀಕವಾಗಿದ್ದಾರೆ. ಆದರೆ ಅವರ ಆಂದೋಲನಕ್ಕೆ ಜನಪ್ರಿಯತೆಯ ಆಯಾಮ ಇದೆ ಎಂದು ತುಷಾರ್ ವಿಶ್ಲೇಷಿಸಿದ್ದಾರೆ.
`ಸೋಮವಾರದಿಂದ ನಾವು ನೋಡುತ್ತಿರುವ ವಿದ್ಯಮಾನಗಳು ಪ್ರಜಾತಾಂತ್ರಿಕ ಹಕ್ಕುಗಳ ಬಗ್ಗೆ ಜನರ ಕಾಳಜಿಯನ್ನು ತೋರಿಸುತ್ತಿವೆ. ಸರ್ಕಾರ ಹಾಗೂ ಜನತೆ ನಡುವಿನ ಸಂಪರ್ಕವೇ ಇಲ್ಲವೆಂಬ ಭಾವವೂ ಇದರಲ್ಲಿ ಸೇರಿದೆ~ ಎಂದಿದ್ದಾರೆ.
ಗಾಂಧಿ ಅವರು ಜೀವಂತ ಇದ್ದಿದ್ದರೆ, ಪರಿಸ್ಥಿತಿ ಇಷ್ಟು ವಿಷಮವಾಗಲು ಆಸ್ಪದವನ್ನೇ ನೀಡುತ್ತಿರಲಿಲ್ಲ. ಆರಂಭದಲ್ಲೇ ಅದನ್ನು ಚಿವುಟಿ ಹಾಕುವ ದಿಸೆಯಲ್ಲಿ ಸಕ್ರಿಯರಾಗುತ್ತಿದ್ದರು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.