ಗೋಧ್ರಾ (ಗುಜರಾತ್) (ಪಿಟಿಐ): ಗೋಧ್ರಾ ರೈಲು ದುರಂತ ಪ್ರಕರಣದ ಆರೋಪದಿಂದ ಮುಕ್ತರಾದ 63 ಮಂದಿ ಎಂಟು ವರ್ಷಗಳ ಬಳಿಕ ತಮ್ಮ ಊರಿಗೆ ಮರಳಿದ್ದಾರೆ.
ಅಹಮದಾಬಾದ್ನ ವಿಶೇಷ ನ್ಯಾಯಾಲಯ ಮಂಗಳವಾರ ಇವರೆಲ್ಲರನ್ನೂ ಖುಲಾಸೆ ಮಾಡಿ, 31 ಮಂದಿಯನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.
ಈ ಹಿನ್ನೆಲೆಯಲ್ಲಿ, ಪ್ರಮುಖ ಆರೋಪಿಯಾಗಿದ್ದ ಮೌಲ್ವಿ ಹುಸೇನ್ ಉಮರಜಿ ಸೇರಿದಂತೆ ಎಲ್ಲ ಆರೋಪ ಮುಕ್ತರನ್ನೂ ಉನ್ನತ ಭದ್ರತೆಯ ಸಬರಮತಿ ಜೈಲಿನಿಂದ ಮಂಗಳವಾರ ತಡ ರಾತ್ರಿಯೇ ಬಿಡುಗಡೆ ಮಾಡಿ ಎರಡು ಬಸ್ಗಳಲ್ಲಿ ಗೋಧ್ರಾಗೆ ಕರೆದೊಯ್ಯಲಾಯಿತು.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಉಮರಜಿ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಅವರ ಮಗ ಸಯೀದ್ ಮಾತನಾಡಿ, ‘ಈ ಪ್ರಕರಣದಲ್ಲಿ ನ್ಯಾಯದಾನ ವಿಳಂಬವಾಯಿತು. ಇದರಿಂದ ನಮ್ಮ ತಂದೆ ಎಂಟು ವರ್ಷ ಕಾಲ ಜೈಲಿನಲ್ಲಿ ಕೊಳೆಯುವಂತಾಯಿತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೋಪ ಮುಕ್ತರಾದ ಇತರರು ಸಹ ಸದ್ಯ ಯಾವುದೇ ಪ್ರತಿಕ್ರಿಯೆ ನೀಡದೆ, ಫೆ. 25ರಂದು ಶಿಕ್ಷೆಯ ಪ್ರಮಾಣ ಪ್ರಕಟವಾದ ಮೇಲೆ ಮಾತನಾಡುವುದಾಗಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.