ADVERTISEMENT

ಗೋವು ಸಾಗಣೆ ಮಾಡುತ್ತಿದ್ದ ವಾಹನ ತಡೆಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿದ ಗೋರಕ್ಷಕರು

ಪಿಟಿಐ
Published 3 ಜುಲೈ 2017, 9:39 IST
Last Updated 3 ಜುಲೈ 2017, 9:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ: ಸೋನಾಪುರ ಬಳಿ ಗೋವು ಸಾಗಣೆ ಮಾಡುತ್ತಿದ್ದ ಮೂರು ವಾಹನಗಳನ್ನು ತಡೆಗಟ್ಟಿದ ಗೋರಕ್ಷಕರು ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು ಹಿಂದೂ ಯುಬ ಛತ್ರ ಪರಿಷತ್  ಸಂಘಟನೆಯ ಸದಸ್ಯರು ಹಲ್ಲೆ ನಡೆಸಿದ್ದಾರೆ.

ಗೋವು ಸಾಗಣೆ ಮಾಡುತ್ತಿದ್ದ ವಾಹನದ ಚಾಲಕರು ಇದಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಹೊಂದಿದ್ದರೂ ಗೋರಕ್ಷಕರು ಹಲ್ಲೆ ನಡೆಸಿದ್ದಾರೆ. ಈ ಘಟನೆಯ ದೃಶ್ಯಾವಳಿಗಳು ಸ್ಥಳೀಯ ಸುದ್ದಿವಾಹಿನಿಯಲ್ಲಿ ಪ್ರಸಾರವಾದರೂ ಹಿಂದೂ ಯುಬ ಛತ್ರ ಪರಿಷತ್‍ನ ಪುಂಡಾಟಿಕೆ ವಿರುದ್ಧ ಕೇಸು ದಾಖಲಿಸಲು ಪೊಲೀಸರು ನಿರಾಕರಿಸುತ್ತಿದ್ದಾರೆ.

ಈ ಬಗ್ಗೆ ಸುದ್ದಿ ಮಾಧ್ಯಮಗಳು ಸೋನಾಪುರ್ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ, ವಾಹನ ಚಾಲಕರು ಗೋವು ಸಾಗಣೆ ಮಾಡುವುದಕ್ಕೆ ದಾಖಲೆ ಪತ್ರಗಳನ್ನು ಹೊಂದಿದ್ದಾರೆ ನಿಜ. ಆದರೆ ಆ ವಾಹನದ ಪರವಾನಗಿ ಪತ್ರದಲ್ಲಿ ದೋಷಗಳಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂರ್ವ ಅಸ್ಸಾಂನ ತಿನ್ಸುಕಿಯಾದಿಂದ ಬಂದ ಟ್ರಕ್ ಮತ್ತು ತ್ರಿಚಕ್ರ ವಾಹನದಲ್ಲಿ ಗೋವುಗಳನ್ನು ಸಾಗಣೆ ಮಾಡಲಾಗುತ್ತಿತ್ತು.

ADVERTISEMENT

ಗೋವು ಸಾಗಣೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ನನಗೇನೂ ಮಾಹಿತಿ ಇಲ್ಲ ಎಂದು ಕಾಮರೂಪ್ (ಮೆಟ್ರೊ) ಜಿಲ್ಲಾ ಪೊಲೀಸ್ ಆಯುಕ್ತ ಹಿರೇನ್ ನಾಥ್ ಹೇಳಿದ್ದಾರೆ. ವಾಹನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಗೋವು ಸಾಗಣೆ ಮಾಡಲಾಗುತ್ತಿತ್ತೇ ಎಂದು ಪರಿಶೀಲಿಸಲು ವಾಹನಗಳನ್ನು ಸಾರಿಗೆ ಇಲಾಖೆಯ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.