ADVERTISEMENT

ಚಂಡಮಾರುತಕ್ಕೆ 26 ಮಂದಿ ಬಲಿ: ಗಂಟೆಗೆ 130 ಕಿ.ಮೀ. ವೇಗದಲ್ಲಿ ಗಾಳಿ

ಏಜೆನ್ಸೀಸ್
Published 2 ಡಿಸೆಂಬರ್ 2017, 10:38 IST
Last Updated 2 ಡಿಸೆಂಬರ್ 2017, 10:38 IST
ಚಿತ್ರ ಕೃಪೆ: ಟ್ವಿಟರ್‌
ಚಿತ್ರ ಕೃಪೆ: ಟ್ವಿಟರ್‌   

ಕೊಲೊಂಬೊ: ಒಖಿ ಚಂಡಮಾರುತದಿಂದ ಉಂಟಾಗಿರುವ ಪ್ರವಾಹದಿಂದ ರಕ್ಷಣೆ ನೀಡಲು ಶ್ರೀಲಂಕಾ ಹಾಗೂ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಶನಿವಾರ ಸಾವಿರಾರು ಜನರನ್ನು ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದ್ದು, ಈವರೆಗೆ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 26ಕ್ಕೆ ಏರಿದೆ.

ಶುಕ್ರವಾರದಿಂದ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ 13 ಮಂದಿ ಹಾಗೂ ಶ್ರೀಲಂಕಾದಲ್ಲಿಯೂ ಅಷ್ಟೇ ಜನರು ಸಾವಿಗೀಡಾಗಿರುವುದು ವರದಿಯಾಗಿದೆ. ಮೀನುಗಾರರೂ ಸೇರಿ ಉಭಯ ರಾಷ್ಟ್ರಗಳ ಒಟ್ಟು 11 ಜನ ಕಾಣೆಯಾಗಿದ್ದಾರೆ.

ಈ ವಲಯದಲ್ಲಿ ಗಂಟೆಗೆ 130 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ವಿದ್ಯುತ್‌ ಹಾಗೂ ಟೆಲಿಫೋನ್‌ ಸಂಪರ್ಕ ಕಡಿತಗೊಂಡಿದೆ. ಪ್ರವಾಹ ಹೆಚ್ಚಿದ್ದು 9 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ADVERTISEMENT

ದಕ್ಷಿಣ ಭಾರತದ ಹಲವು ನದಿಗಳು ತುಂಬಿ ಹರಿಯುತ್ತಿದ್ದು, ಮಳೆಯ ಪ್ರಮಾಣ ಇನ್ನೂ ಹೆಚ್ಚುವುದಾಗಿ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಲಕ್ಷದ್ವೀಪದ ಕಡೆಗೆ ಪ್ರತಿ ಗಂಟೆಗೆ 145 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.

ಶ್ರೀಲಂಕಾದ 16 ಜಿಲ್ಲೆಗಳ 77 ಸಾವಿರ ಜನರಿಗೆ ಚಂಡಮಾರುತದಿಂದ ಹಾನಿಯಾಗಿದೆ. ದಕ್ಷಿಣ ಭಾರತದ ಕರಾವಳಿ ಭಾಗದಲ್ಲಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಿದ್ದು, 4000 ವಿದ್ಯುತ್‌ ಸಂಪರ್ಕ ಸರಿಪಡಿಸಲು ಕಾರ್ಯಾಚರಣೆ ನಡೆದಿದೆ.

ಚಂಡಮಾರುತದ ಪರಿಣಾಮ 1991ರಲ್ಲಿ ಒಡಿಶಾದಲ್ಲಿ 8 ಸಾವಿರ ಜನರು ಸಾವಿಗೀಡಾಗಿದ್ದರು.

ಪೂರ್ವ ಕರಾವಳಿಯ ಸಮೀಪ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿದ್ದು, ಒಖಿ ಚಂಡಮಾರುತ ಕ್ಷೀಣಿಸುತ್ತಿರುವುದಾಗಿಯೂ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.