ನವದೆಹಲಿ (ಪಿಟಿಐ): ಆದರ್ಶ ಹಗರಣದಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ಕೆ.ಶಂಕರನಾರಾಯಣ ಅವರು ಸಿಬಿಐಗೆ ಅನುಮತಿ ನೀಡಿಲ್ಲ. ಆದ್ದರಿಂದ ತನಿಖಾ ಸಂಸ್ಥೆಯು ಚವಾಣ್ ವಿರುದ್ಧದ ಪ್ರಕರಣವನ್ನು ಕೈಬಿಡದೇ ವಿಧಿ ಇಲ್ಲ.
ಹಗರಣ ಬೆಳಕಿಗೆ ಬಂದ ಬಳಿಕ ಚವಾಣ್, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚವಾಣ್ ಸೇರಿದಂತೆ ಒಟ್ಟು 12ಮಂದಿ ವಿರುದ್ಧ ಸಿಬಿಐ ಆರೋಪಟ್ಟಿ ಸಲ್ಲಿಸಿತ್ತು.
ಆರೋಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿದ್ದನ್ನು ಚವಾಣ್ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ತಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸುವುಕ್ಕೆ ರಾಜ್ಯಪಾಲರಿಂದ ಸಿಬಿಐ ಅನುಮತಿ ಪಡೆದುಕೊಂಡಿಲ್ಲ ಎಂದಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಬೇಕಿಲ್ಲ ಎಂದು ಸಿಬಿಐ ವಾದಿಸಿತ್ತು. ಚವಾಣ್ ವಿಚಾರಣೆಗೆ ರಾಜ್ಯಪಾಲರ ಅನುಮತಿ ಪಡೆದುಕೊಳ್ಳುವಂತೆ ನಂತರದಲ್ಲಿ ಕೋರ್ಟ್, ಸಿಬಿಐಗೆ ನಿರ್ದೇಶನ ನೀಡಿತ್ತು. ಆದರೆ ರಾಜ್ಯಪಾಲರು ಅನುಮತಿ ನೀಡುವುದಕ್ಕೆ ನಿರಾಕರಿಸಿದ್ದಾರೆ.
‘ಈಗ ನಾವು ಏನೂ ಮಾಡಲಾಗದು. ಇದು ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಷಯ’ ಎಂದು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.