ADVERTISEMENT

ಚಾಟಿ ಬೀಸಿದ ಸರ್ಕಾರ: ಭ್ರಷ್ಟ ಅಧಿಕಾರಿ ಮನೆಗೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 8:05 IST
Last Updated 24 ಜನವರಿ 2012, 8:05 IST

ಪಟ್ನಾ (ಐಎಎನ್ಎಸ್): ಆರೋಪ ಸ್ಥಿರಪಟ್ಟ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ 50,000 ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಸಾರಿಗೆ ಇಲಾಖೆಯ ಅಧಿಕಾರಿಯನ್ನು ಬಿಹಾರ ಸರ್ಕಾರ ಸೇವೆಯಿಂದ ವಜಾ ಮಾಡಿ ಮನೆಗೆ ಕಳುಹಿಸಿದೆ.

ಸಾರಿಗೆ ಇಲಾಖೆಯ ಮೋಟಾರು ವಾಹನಗಳ ತನಿಖಾಧಿಕಾರಿ ರಘುವಂಶ ಕುನ್ವರ್ ಅವರು 2009ರಲ್ಲಿ 50,000 ರೂಪಾಯಿ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದರು. ತನಿಖೆಯ ನಂತರ ಅವರು 80 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಗಳಿಕಯೆ ಆಸ್ತಿ ಹೊಂದಿದ್ದು ಪತ್ತೆಯಾಗಿತ್ತು.

ಇಲಾಖಾ ತನಿಖೆಯ ನಂತರ, ಲಂಚದ ಆರೋಪದ ಮೇಲೆ ಅಮಾನತ್ತಿನಲ್ಲಿರಿಸಿದ್ದ ಕುನ್ವರ್ ಅವರನ್ನು ಈಗ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಸಿಬ್ಬಂದಿ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ADVERTISEMENT

ಸೇವೆಯಿಂದ ವಜಾಗೊಂಡಿರುವ ಕುನ್ವರ್ ಅವರು,  ಪಟ್ನಾದ ಕಂಕರಬಾಗ ಪ್ರದೇಶದಲ್ಲಿ ಎರಡು ನಿವೇಶನ ಹಾಗೂ ನಾಲ್ಕು ಅಂತಸ್ತಿನ ಕಟ್ಟಡ ಹಾಗೂ ಚೈರಾದಲ್ಲಿ ಮನೆ ಹೊಂದಿದ್ದಾರೆ. ಇದಲ್ಲದೇ ಒಂದು ಜೀಪು, 1.94 ಲಕ್ಷ ರೂಪಾಯಿ ನಗದು ಹೊಂದಿದ್ದು ಪತ್ತೆಯಾಗಿತ್ತು .ಮತ್ತು 8 ಲಕ್ಷ ರೂಪಾಯಿಯವರೆಗೆ ಹಣ ಹೂಡಿದ್ದ ದಾಖಲೆಗಳು ಲಭಿಸಿದ್ದವು.

ಇದುವರೆಗೆ ಬಿಹಾರ ಸರ್ಕಾರವು,  ಭ್ರಷ್ಟರಾಗಿದ್ದ ಪಟ್ನಾದಲ್ಲಿನ ಐಎಎಸ್ ಅಧಿಕಾರಿ ಶಿವ ಶಂಕರ್ ವರ್ಮಾ, ಖಜಾನೆ ಇಲಾಖೆಯ ಸಿಬ್ಬಂದಿ ಗಿರೀಶ್ ಕುಮಾರ್ ಅವರ ಸ್ಥರಾಸ್ತಿಗಳನ್ನು ಮುಟ್ಟಗೋಲು ಹಾಕಿಕೊಂಡಿದೆ. ಕನ್ವರ್ ಅವರ ಅರ್ಜಿ ಪಟ್ನಾದ ಹೈಕೋರ್ಟಿನಲ್ಲಿ ವಿಚಾರಣೆಯ ಹಂತದಲ್ಲಿರುವ ಕಾರಣ ಅವರಿಗೆ ಸೇರಿದ್ದ ಆಸ್ತಿಯನ್ನು ಇನ್ನೂ ಮುಟ್ಟುಗೋಲು ಹಾಕಿಕೊಂಡಿಲ್ಲ.

ಇದಲ್ಲದೇ, ಲಂಚ ಪಡೆದ ಆರೋಪ ಹೊತ್ತಿರುವ ಐವರು ಹಿರಿಯ ಅಧಿಕಾರಿಗಳ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿತೀಶ್ ಕುಮಾರ್ ಅವರ ಸರ್ಕಾರ ಕ್ರಮ ಕೈಗೊಂಡಿದೆ. ಜೊತೆಗೆ 11 ಮಂದಿ ಭ್ರಷ್ಟ ಅಧಿಕಾರಿಗಳ ಬಂಧನಕ್ಕೂ ಕ್ರಮ ಕೈಗೊಂಡಿದೆ.

ಕಳೆದ 2010 ನವೆಂಬರ್ ಸಾಲಿನಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ನಿತೀಶ್ ಕುಮಾರ್ ಅವರು ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಪಟ್ನಾ ಹೈ ಕೋರ್ಟ್ ನಿಂದ ಅನುಮತಿ ಪಡೆದು ಪಟ್ನಾ, ಭಾಗಲಪುರ್ ಮತ್ತು ಮುಝಪ್ಫರ್ ಪುರ್ ಗಳಲ್ಲಿ ತಲಾ ಎರಡೆರಡು ವಿಶೇಷ ನ್ಯಾಯಾಲಯಗಳನ್ನು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.