ನವದೆಹಲಿ: ಚಿಕಿತ್ಸೆಗಾಗಿ ಮುಸ್ಲಿಮರೂ ಗೋಮೂತ್ರ ಬಳಸಬಹುದು ಎಂದು ಪತಂಜಲಿ ಕಂಪೆನಿಯ ಸಂಸ್ಥಾಪಕ, ಯೋಗ ಗುರು ಬಾಬಾ ರಾಮ್ದೇವ್ ಹೇಳಿದ್ದಾರೆ.
ಇಂಡಿಯಾ ಟಿವಿಯ ‘ಆಪ್ ಕೀ ಅದಾಲತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚಿಕಿತ್ಸೆಗಾಗಿ ಗೋಮೂತ್ರ ಬಳಸಬಹುದು ಎಂದು ಕುರ್ ಆನ್ನಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಜನ ಪತಂಜಲಿ ಹಿಂದೂ ಕಂಪೆನಿ ಎಂದು ಅದನ್ನು ಗುರಿಯಾಗಿಸುತ್ತಿದ್ದಾರೆ. ನಾನು ಎಂದಾದರೂ ಹಮ್ದರ್ದ್ (ಮುಸ್ಲಿಮರು ಸ್ಥಾಪಿಸಿದ ಕಂಪೆನಿ) ಅನ್ನು ಗುರಿಯಾಗಿಸಿದ್ದೇನೆಯೇ’ ಎಂದು ಪ್ರಶ್ನಿಸಿದ್ದಾರೆ.
‘ಹಮ್ದರ್ದ್ ಮತ್ತು ಹಿಮಾಲಯ ಔಷಧ ಕಂಪೆನಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಯೋಗ ಗ್ರಾಮವನ್ನು ಸ್ಥಾಪಿಸುವುದಕ್ಕಾಗಿ ಹಿಮಾಲಯ ಕಂಪೆನಿಯ ಫಾರೂಕ್ ಭಾಯಿ ನನಗೆ ಭೂಮಿಯನ್ನೂ ದಾನ ಮಾಡಿದ್ದಾರೆ. ಕೆಲವು ಜನ ಮಾತ್ರ ಆರೋಪ ಮಾಡುತ್ತಿದ್ದಾರೆ ಎಂದರೆ, ಅದು ದ್ವೇಷದಿಂದ ಕೂಡಿದ್ದು ಎಂದರ್ಥ’ ಎಂದು ರಾಮ್ದೇವ್ ಹೇಳಿದ್ದಾರೆ.
ಪತಂಜಲಿ ಕಂಪೆನಿಯ ಉತ್ತರಾಧಿಕಾರಿಗಳನ್ನಾಗಿ 500 ಸಾಧುಗಳನ್ನು ನೇಮಕ ಮಾಡುವುದಾಗಿಯೂ ರಾಮ್ದೇವ್ ಮಾಹಿತಿ ನೀಡಿದ್ದಾರೆ. ‘ಉತ್ತರಾಧಿಕಾರಿಯು ಉದ್ಯಮಿ ಅಥವಾ ಲೌಕಿಕ ವ್ಯಕ್ತಿಯಾಗಿರಬಾರದು. ನಾನು ತರಬೇತಿ ನೀಡಿದ 500 ಸಾಧುಗಳಾಗಿರಬೇಕು’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.