ADVERTISEMENT

ಚಿಕಿತ್ಸೆ ನೀಡಿದ ವೈದ್ಯರಿಗೆ ಉಚಿತ ಹೋಟೆಲ್ ವ್ಯವಸ್ಥೆ

ಅಪೌಷ್ಟಿಕತೆ ತೊಡೆದು ಹಾಕಲು ವಿನೂತನ ಯತ್ನ

ಪಿಟಿಐ
Published 31 ಮೇ 2018, 19:30 IST
Last Updated 31 ಮೇ 2018, 19:30 IST
ಡಾ. ವಿಜಯ್ ಸೂರ್ಯವಂಶಿ
ಡಾ. ವಿಜಯ್ ಸೂರ್ಯವಂಶಿ   

ಅಲಿಬಾಗ್, ಮಹಾರಾಷ್ಟ್ರ: ಬುಡಕಟ್ಟು ಜನರನ್ನು ಕಾಡುತ್ತಿರುವ ಅಪೌಷ್ಟಿಕತೆ ತೊಡೆದು ಹಾಕಲು ಮಹಾರಾಷ್ಟ್ರದ ರಾಯಗಡ ಜಿಲ್ಲಾಧಿಕಾರಿ ಡಾ. ವಿಜಯ್ ಸೂರ್ಯವಂಶಿ ಅವರು ವಿನೂತನ ಕಾರ್ಯಕ್ರಮ ರೂಪಿಸಿದ್ದಾರೆ.

ಬುಡಕಟ್ಟು ಪ್ರದೇಶಗಳ ಆಸ್ಪತ್ರೆಗಳಿಗೆ ವಾರಾಂತ್ಯಗಳಲ್ಲಿ ಭೇಟಿ ನೀಡಿ ಅಲ್ಲಿನ ಜನರಿಗೆ ಚಿಕಿತ್ಸೆ ನೀಡುವಂತೆ ಅವರು ಮುಂಬೈ ಹಾಗೂ ಪುಣೆಯ ನುರಿತ ವೈದ್ಯರ ಮನವೊಲಿಸಿದ್ದಾರೆ. ಪ್ರತಿಯಾಗಿ ವೈದ್ಯರಿಗೆ ಕೊಡುಗೆಯೊಂದನ್ನು ನೀಡಿದ್ದಾರೆ.ಆಯಾ ಪ್ರದೇಶದ ಹೋಟೆಲ್‌ಗಳಲ್ಲಿ ಅವರು ಉಚಿತವಾಗಿ ತಂಗುವ ಹಾಗೂ ವಾರಾಂತ್ಯ ಕಳೆಯುವ ಅವಕಾಶ ಮಾಡಿಕೊಟ್ಟಿದ್ದಾರೆ.

‘ಬುಡಕಟ್ಟು ಪ್ರದೇಶಗಳಲ್ಲಿ ಶಿಬಿರಗಳನ್ನು ಆಯೋಜಿಸಿ, ಸ್ಥಳೀಯರಿಗೆ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ಈ ಪರಿಕಲ್ಪನೆಯನ್ನು ಮಥೇರಾನ್ ಗಿರಿಧಾಮ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದೆವು. ಈಗ ಮಥೇರಾನ್ ಹಾಗೂ ಜಿಲ್ಲೆಯ ಕಾಜ್ರತ್‌ನಲ್ಲಿರುವ ಹೋಟೆಲ್ ಮಾಲೀಕರು ವೈದ್ಯರಿಗೆ ಉಚಿತವಾಗಿ ಉಳಿಯುವ ವ್ಯವಸ್ಥೆ ಮಾಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ADVERTISEMENT

ಕಾಜ್ರತ್ ತಾಲ್ಲೂಕು ಪ್ರದೇಶವು ವಾರಾಂತ್ಯ ವಿಹಾರ ತಾಣ ಎಂದೇ ಹೆಸರಾಗಿದೆ. ಖ್ಯಾತ ಸೆಲೆಬ್ರಿಟಿಗಳ ಫಾರ್ಮ್‌ಹೌಸ್‌ಗಳೂ ಇಲ್ಲಿವೆ. ಮುಂಬೈ ಹಾಗೂ ಪುಣೆಯಿಂದ ಸಮಾನ ದೂರದಲ್ಲಿರುವ ಈ ಪ್ರದೇಶದಲ್ಲೂ ಅಪೌಷ್ಟಿಕತೆ ಸಮಸ್ಯೆ ಇದೆ. ತಜ್ಞ ವೈದ್ಯರ ಕೊರತೆ ಇದ್ದಿದ್ದರಿಂದ ಎರಡು ಲಕ್ಷ ಜನರಿರುವ ಈ ಪ್ರದೇಶದಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯ ನೀಡಲು ಆಗಿರಲಿಲ್ಲ. 2017ರ ನವೆಂಬರ್‌ನಲ್ಲಿ ಅಪೌಷ್ಟಿಕತೆಯಿಂದ ಬಾಲಕಿಯೊಬ್ಬಳು ಮೃತಪಟ್ಟಿದ್ದರಿಂದ ಜಿಲ್ಲಾಧಿಕಾರಿಗಳು ಈ ವಿನೂತನ ಕಾರ್ಯಕ್ರಮ ಹಾಕಿಕೊಳ್ಳಲು ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.