ADVERTISEMENT

ಚೀನಾ ಅಣೆಕಟ್ಟುಅಪಾಯ ಇಲ್ಲ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

ನವದೆಹಲಿ (ಪಿಟಿಐ): ಬ್ರಹ್ಮಪುತ್ರ ನದಿಗೆ ಚೀನಾ ನಿರ್ಮಿಸಲಿರುವ ಅಣೆಕಟ್ಟೆಯಿಂದ ರಾಷ್ಟ್ರಕ್ಕೆ ತೊಂದರೆಯಾಗಲಿದೆ ಎಂಬ ಗ್ರಹಿಕೆಗಳನ್ನು ಭಾರತ ಮಂಗಳವಾರ ತಳ್ಳಿಹಾಕಿದೆ.  ಈ ಯೋಜನೆ ಬಗ್ಗೆ ತಕ್ಷಣಕ್ಕೆ ಭೀತಿ ಪಡುವಂಥದ್ದೇನೂ ಇಲ್ಲ ಎಂದು ಅದು ಹೇಳಿದೆ.

 `ಜಂಗ್ಮುನಲ್ಲಿ ಚೀನಾ ಅಣೆಕಟ್ಟೆ ನಿರ್ಮಿಸುತ್ತಿದೆ ಎಂಬುದು ನಿಜ. ಜಲ ವಿದ್ಯುತ್ ಯೋಜನೆಗಾಗಿ ಹರಿಯುವ ನೀರನ್ನು ಬಳಸುತ್ತಿದ್ದು ಇಲ್ಲಿ ನೀರಿನ ಸಂಗ್ರಹ ಮಾಡುತ್ತಿಲ್ಲ. ಇದು ಭಾರತದ ನದಿ ಹರಿವಿನ ದಿಕ್ಕಿನ ಪ್ರದೇಶಗಳಿಗೆ ಧಕ್ಕೆ ಉಂಟು ಮಾಡುವುದಿಲ್ಲ. ಈ ವಿಷಯವನ್ನು ನಮ್ಮದೇ ಮೂಲಗಳು ಖಚಿತ ಪಡಿಸಿವೆ ಎಂದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಹೇಳಿದ್ದಾರೆ.

ವರದಿಗಾರರ ಜತೆ ಮಾತನಾಡುತ್ತಿದ್ದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ, `ಅಣೆಕಟ್ಟೆ ಬಗ್ಗೆ ಭೀತಿ ಪಡುವ ತುರ್ತು ಇಲ್ಲ~ ಎಂದು ಅವರು ತಿಳಿಸಿದ್ದಾರೆ.

 ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಾಣ ಮತ್ತು ಚೀನಾದ ಉತ್ತರ ಭಾಗಕ್ಕೆ ನದಿ ದಿಕ್ಕು ಬದಲಾಯಿಸುವ ಆಲೋಚನೆಗಳ ಕುರಿತ ಇತ್ತೀಚಿನ ವರದಿಗಳು `ಹೊಸದೇನಲ್ಲ. ಈ ಹಿಂದೆಯೇ ಗೊತ್ತಿರುವ ವಾಸ್ತವಾಂಶಗಳು~ ಎಂಬುದಾಗಿಯೂ ಅವರು  ಪ್ರತಿಕ್ರಿಯಿಸಿದ್ದಾರೆ.

ಬ್ರಹ್ಮಪುತ್ರದ ಜಲಾನಯನ ಪ್ರದೇಶ ಬಹುತೇಕ ಭಾಗ ಭಾರತದ ಗಡಿ ವ್ಯಾಪ್ತಿಯಲ್ಲಿದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಇದರ ಲಾಭ ಪಡೆದು ನದಿ ನೀರನ್ನು ಬಳಸಿಕೊಳ್ಳಬೇಕಾಗಿದೆ. ಇದು ಬಹಳ ಮುಖ್ಯ ವಿಷಯ ಎಂದಿದ್ದಾರೆ.

ಸಾಂಘಿ ಶೃಂಗಸಭೆಯಲ್ಲಿ ಭಾಗವಹಿಸಲು ಕಜಕ್‌ಸ್ತಾನಕ್ಕೆ ಹೊರಟಿದ್ದ ಅವರು ಭಾರತ ಮತ್ತು ಚೀನಾ ನಡುವಣ ದ್ವಿಪಕ್ಷೀಯ ವಿಷಯಗಳು ಅಲ್ಲಿ ಚರ್ಚೆಯಾಗುವುದೇ ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

`ಆದರೂ ಭಾರತವು ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ನಾನು ರಾಷ್ಟ್ರದ ಜನತೆಗೆ ಖಚಿತಪಡಿಸುತ್ತೇನೆ. ನಾನು ಹೇಳಿದಂತೆ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳು ಬ್ರಹ್ಮಪುತ್ರ ನದಿಯ ಸಂಪೂರ್ಣ ಉಪಯೋಗ ಪಡೆದುಕೊಳ್ಳಬೇಕು~ ಎಂದು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.