ADVERTISEMENT

ಜಂಗ್ಲಿಗಳಾಗಿ; ನಕ್ಸಲರ ಸದೆಬಡಿಯಿರಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ನವದೆಹಲಿ (ಪಿಟಿಐ): ನಕ್ಸಲರನ್ನು ಸದೆಬಡಿಯುವ ಸಲುವಾಗಿ ಸ್ವತಃ ಜಂಗ್ಲಿ (ಕಾಡು ಮನುಷ್ಯರು)ಗಳಾಗಿ ಬದಲಾಗಿ ಎಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಸುಮಾರು 70 ಸಾವಿರಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರಿಗೆ ಪಡೆಯ ಮುಖ್ಯಸ್ಥ ಕೆ.ವಿಜಯ ಕುಮಾರ್ ಹೊಸ ಮಂತ್ರ ಬೋಧಿಸಿದ್ದಾರೆ.

ನಕ್ಸಲರನ್ನು ನಿರ್ನಾಮ ಮಾಡುವ ಮುನ್ನ ಚೆನ್ನಾಗಿ `ಚಚ್ಚಿ~ಹಾಕಿ ಎಂದೂ ಅವರು ಇದೇ ವೇಳೆ ಕರೆ ನೀಡಿದ್ದಾರೆ.

`ಬೇಟೆಗಾರರು ಬೇಟೆಗೆ ಹೊಂಚು ಹಾಕುವಂತೆ ನೀವೂ ಹೊಂಚು ಹಾಕಿ ಅವರನ್ನು ನಿರ್ನಾಮ ಮಾಡಿ. ತರಬೇತಿ, ಆಯುಧ, ತಂತ್ರಗಾರಿಕೆ, ದೈಹಿಕ ಸಾಮರ್ಥ್ಯ, ಅಷ್ಟೇ ಏಕೆ ಆಹಾರ ಸೇವನೆಯಲ್ಲಿಯೂ ನಿಮ್ಮ ಶತ್ರುಗಳು ನಿಮಗಿಂತಲೂ ದುರ್ಬಲರು ಎಂಬುದನ್ನು ನೆನಪಿನಲ್ಲಿಡಿ. ಅವರೆಂದೂ ಮುಖಾಮುಖಿ ಭೇಟಿಗೆ ಮುಂದಾಗಲಾರರು.

ಹೊಂಚು ಹಾಕಿ ಬೇಟೆಯಾಡಿ ಪಲಾಯನ ಮಾಡುವುದರಲ್ಲಿ ಅವರು ನಿಸ್ಸೀಮರು~ ಎಂದು ವಿಜಯ ಕುಮಾರ್ ಯೋಧರಿಗೆ ನೆನಪಿಸಿದರು. ಛತ್ತೀಸ್‌ಗಡದ ದಾಂತೇವಾಡದಲ್ಲಿ 75 ಯೋಧರು ನಕ್ಸಲೀಯರಿಗೆ ಬಲಿಯಾಗಿ ಪಡೆ ತೀವ್ರ ಹಿನ್ನಡೆ ಅನುಭವಿಸಿದ್ದ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡ ವಿಜಯ ಕುಮಾರ್, ಪ್ರತಿ ತಿಂಗಳೂ ಯೋಧರಿಗೆ ಪತ್ರ ಬರೆಯುವ ಮೂಲಕ ಅವರ ನೈತಿಕ ಧೈರ್ಯ ಹೆಚ್ಚಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.